ಬೆಂಗಳೂರು: ಹಿಂದುಳಿದ ವರ್ಗಕ್ಕೆ ಸೇರಿದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ₹6 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2018ರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ನಲ್ಲಿ ಕೆನೆ ಪದರ ಆದಾಯ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.
ಈ ಸಂಬಂಧ ಇದೇ 14ರಂದು ಆದೇಶ ಹೊರಬಿದ್ದಿದೆ. ಹಿಂದುಳಿದ ವರ್ಗಗಳ ಪ್ರವರ್ಗ–2ಎ, 2ಬಿ, 3 ಎ ಹಾಗೂ 3 ಬಿ ಸಮುದಾಯಗಳಿಗೆ ಸೇರಿದ ಅಭ್ಯರ್ಥಿ ಹಾಗೂ ಅವರ ತಂದೆ ಮತ್ತು ತಾಯಿ ಅಥವಾ ಪೋಷಕರ ಆದಾಯ ಮಿತಿಯನ್ನು ₹ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಸಾಮಾಜಿಕವಾಗಿ ಮುಂದುವರಿದ ವ್ಯಕ್ತಿಗಳು, ವರ್ಗಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರಗಿಡಲು ಕೆನೆಪದರ ನೀತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಹೆಚ್ಚು ಇದ್ದ ವ್ಯಕ್ತಿಗಳಿಗೆ ಕೆನೆಪದರ ಮೀಸಲಾತಿಯ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಆದಾಯ ಮಿತಿ ಏರಿಸಿರುವುದರಿಂದ ಹಿಂದುಳಿದ ವರ್ಗಗಳಿಗೆ ಸೇರಿರುವ ಹೆಚ್ಚಿನ ವ್ಯಕ್ತಿಗಳಿಗೆ ಈ ಸೌಲಭ್ಯ ಸಿಗಲಿದೆ.
2002ರಲ್ಲಿ ಈ ನೀತಿಯನ್ನು ಜಾರಿಗೆ ತಂದಾಗ ವಾರ್ಷಿಕ ಆದಾಯ ಮಿತಿ ₹2 ಲಕ್ಷ ಇತ್ತು. 2012ರಲ್ಲಿ ಇದನ್ನು ₹3.50 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ 2013 ಹಾಗೂ 2015ರಲ್ಲಿ ಈ ಮೊತ್ತವನ್ನು ಕ್ರಮವಾಗಿ ₹4.50 ಲಕ್ಷ ಹಾಗೂ ₹6 ಲಕ್ಷಕ್ಕೆ ಏರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.