ADVERTISEMENT

ಕಳಪೆ ಬಿತ್ತನೆ ಬೀಜ ಮಾರಾಟ | ಆರೋಪಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

​ಪ್ರಜಾವಾಣಿ ವಾರ್ತೆ
Published 7 ಮೇ 2020, 12:45 IST
Last Updated 7 ಮೇ 2020, 12:45 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಬೆಂಗಳೂರು: ಆಂಧ್ರಪ್ರದೇಶದಿಂದ ಕಳಪೆ ಬಿತ್ತನೆ ಬೀಜ ತಂದು ರಾಜ್ಯದಲ್ಲಿ ಮಾರಾಟ ಮಾಡುವ ಮಾಫಿಯಾವನ್ನು ಪತ್ತೆ ಮಾಡಿ, ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಆಂಧ್ರದ ಮಾಫಿಯಾ ಅಲ್ಲಿ ತಿರಸ್ಕೃತಗೊಂಡ ಬಿತ್ತನೆ ಬೀಜಗಳಾದ ಹತ್ತಿ, ಸೂರ್ಯಕಾಂತಿ, ಮುಸುಕಿನಜೋಳ ಮುಂತಾದವುಗಳನ್ನು ನಮ್ಮ ರಾಜ್ಯಕ್ಕೆ ತಂದು ಮಾರಾಟ ಮಾಡುತ್ತಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 10 ಸಾವಿರ ಕ್ವಿಂಟಲ್‌ಗೂ ಹೆಚ್ಚು ಬಿತ್ತನೆ ಬೀಜವನ್ನು ವಶಕ್ಕೆ ತೆಗೆದುಕೊಂಡು ಎಂಟು ಜನರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪಾಟೀಲ ಹೇಳಿದರು.

ADVERTISEMENT

ಆರ್ಥಿಕ ಸಂಕಷ್ಟದ ಮಧ್ಯೆಯೂ ಮುಖ್ಯಮಂತ್ರಿಯವರು ಕಾರ್ಮಿಕರು ಮತ್ತು ಇತರ ಶ್ರಮಿಕರ ಬಗ್ಗೆ ಕಾಳಜಿವಹಿಸಿ ಪ್ಯಾಕೇಜ್‌ ಪ್ರಕಟಿಸಿದ್ದಾರೆ. ಆದ್ದರಿಂದ ಹಣ್ಣು–ತರಕಾರಿ ಬೆಳೆಗಾರರಿಗೆ ಇಂತಿಷ್ಟೇ ಪರಿಹಾರ ನೀಡಿ ಅಂತ ಒತ್ತಾಯ ಮಾಡುವುದಿಲ್ಲ. ಪರಿಹಾರ ಎನ್ನುವುದು ಪ್ರಾಣ ಬಿಡುವವನಿಗೆ ಜೀವ ಜಲ ನೀಡಿದ ಉಳಿಸಿದಂತೆ. ಬದುಕುವ ವ್ಯವಸ್ಥೆ ಆಗಬೇಕಿದೆ ಎಂದು ಅವರು ಹೇಳಿದರು.

ಲಾಕ್‌ಡೌನ್‌ನಿಂದಾಗಿ ಹಣ್ಣು ತರಕಾರಿಗಳಿಗೆ ಬೇಡಿಕೆ ಕುಸಿದು ಹೋಗಿದೆ. ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೊಟೇಲ್‌ ಮತ್ತು ಶೂಸ್‌ ಅಂಗಡಿಗಳು ತೆರೆಯದ ಕಾರಣ, ಹಣ್ಣುಗಳ ಮಾರಾಟ ಆಗುತ್ತಿಲ್ಲ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಯವರು ಪರಿಹಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.