ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಅವಧಿಯ ಆರಂಭದಲ್ಲಿ ಮದ್ಯದಂಗಡಿಗಳಲ್ಲಿ ಇದ್ದ ಮದ್ಯದ ಸ್ಟಾಕ್ ಮತ್ತು ಲಾಕ್ಡೌನ್ ಅಂತ್ಯದಲ್ಲಿ ಲಭ್ಯವಿದ್ದ ಸ್ಟಾಕ್ನಲ್ಲಿ ವ್ಯತ್ಯಾಸವಿದ್ದರೆ, ಅದನ್ನು ಕಳ್ಳತನದ ವ್ಯಾಪಾರ ಎಂದು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನ ನೀಡಿದೆ.
ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರಿಗೆ ಈ ಸಂಬಂಧ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಾಟೀಲರು, ‘ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಸೇರಿದಂತೆ ಅನೇಕ ಅನಪೇಕ್ಷಣೀಯ ವ್ಯವಹಾರಗಳು ನಡೆದಿವೆ. ಮದ್ಯದಂಗಡಿಗಳನ್ನು ಅಧಿಕೃತವಾಗಿ ಆರಂಭಿಸುವವರೆಗೆ ನಡೆದಿರುವ ವ್ಯಾಪಾರ ಕಳ್ಳಮಾರ್ಗದಲ್ಲಿ ನಡೆದಿರುವಂತದ್ದಾಗಿದೆ ಎಂದು ಸಭೆಯಲ್ಲಿ ಎಲ್ಲ ಸದಸ್ಯರು ಅಭಿಪ್ರಾಯಪಟ್ಟರು’ ಎಂದು ಹೇಳಿದರು.
ಡಿಸ್ಟಿಲರಿಗಳ ಮೂಲಗಳ ಮೂಲಕ ಮದ್ಯಸಾರ ಉತ್ಪಾದನೆ ಮತ್ತು ಇಳುವರಿಗಳಲ್ಲಿ ವ್ಯತ್ಯಾಸವಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಪ್ರತಿ ವರ್ಷ ನಷ್ಟವಾಗುತ್ತಿದೆ ಎಂದು ಈ ಹಿಂದೆ ಸಾರಾಯಿ ನಿಷೇಧ ಮಾಡಲಾಯಿತು. ಆ ಬಳಿಕ ಸಾರಾಯಿ ಮಾರಾಟಗಾರರಿಗೆ ಪುನರ್ವಸತಿ ಕಲ್ಪಿಸಲಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್,ಬಿ.ಕೆ.ಹರಿಪ್ರಸಾದ್ ಮತ್ತು ಇತರ ಸದಸ್ಯರು ಟೀಕಿಸಿದರು.
ಲಾಕ್ಡೌನ್ ಸಂದರ್ಭದ ಮದ್ಯ ವ್ಯಾಪಾರದ ಬಗ್ಗೆ ಅಬಕಾರಿ ಆಯುಕ್ತರು ಮತ್ತು ಅಧಿಕಾರಿಗಳು ಪೂರ್ಣ ಮಾಹಿತಿ ಒದಗಿಸದೇ ಇರುವ ಬಗ್ಗೆ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.