ADVERTISEMENT

ಕಲಬುರ್ಗಿ: ಮನೆ ಬಾಗಿಲಿಗೇ ತರಕಾರಿ ತಲುಪಿಸಲು ಯೋಜನೆ

55 ವಾರ್ಡ್‌ಗಳಿಗೆ 95 ವ್ಯಾಪಾರಿಗಳು– ಪಾಲಿಕೆ ಸಿಬ್ಬಂದಿಯ ತಂಡಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 9:59 IST
Last Updated 26 ಮಾರ್ಚ್ 2020, 9:59 IST
   

ಕಲಬುರ್ಗಿ: ದೈನಂದಿನ ಅತ್ಯವಶ್ಯಕ ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯಾಪಾರಿ ಹಾಗೂ ಪಾಲಿಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಜಿಲ್ಲಾಧಿಕಾರಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಕೊರೊನಾ ವೈರಾಣು ಹರಡುವುದನ್ನು ತಡೆಯಲು ಹಾಗೂ ದಿನಸಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ನಗರದ ಎಲ್ಲ ವಾರ್ಡ್‌ಗಳು, ಬಡಾವಣೆ ಹಾಗೂ ಜನವಸತಿ ಪ‍್ರದೇಶಗಳಿಗೂ ತರಕಾರಿಗಳನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ.

ಇದರಲ್ಲಿ ಪ್ರತಿಯೊಬ್ಬ ತರಕಾರಿ ವ್ಯಾಪಾರಿಯ ಜತೆಗೆ, ಒಬ್ಬ ಪಾಲಿಕೆ ಸಿಬ್ಬಂದಿ ಉಸ್ತುವಾರಿಯಾಗಿ ಇರುತ್ತಾರೆ. ತಳ್ಳುವ ಗಾಡಿ, ವಾಹನಗಳಲ್ಲಿ ತರಕಾರಿಗಳನ್ನು ಪ್ರತಿ ಓಣಿಗೂ ಹೋಗಿ ಮನೆ ಮುಂದೆ ನಿಂತು, ಜನಸಂದಣಿ ಆಗದಂತೆ ತಲುಪಿಸಬೇಕು. ಜತೆಗೆ, ಅದರ ವರದಿ ಹಾಗೂ ಚಿತ್ರವನ್ನೂ ಜಿಲ್ಲಾಡಳಿತ ಹಾಗೂ ಪಾಲಿಕೆಗೆ ನೀಡಬೇಕು.

ADVERTISEMENT

ಒಟ್ಟು 55 ವಾರ್ಡ್‌ಗಳಿಗಾಗಿ 96 ತಂಡಗಳನ್ನು ಮಾಡಲಾಗಿದೆ. ಪ್ರತಿಯೊಬ್ಬ ತರಕಾರಿ ವ್ಯಾಪಾರಿ ಹಾಗೂ ಉಸ್ತುವಾಸಿ ಸಿಬ್ಬಂದಿಯ ಮೊಬೈಲ್‌ ನಂಬರ್‌ಗಳನ್ನು ಕೂಡ ನಮೂದಿಸಿದ್ದು, ತರಕಾರಿ ಅಗತ್ಯವಿದ್ದವರು ಅವರನ್ನು ಸಂಪರ್ಕಿಸಬಹುದು. ಮಾರ್ಚ್‌ 31ರವರೆಗೂ ಈ ತಂಡಗಳು ಸಂಚರಿಸಬೇಕು. ಒಂದು ಕುಟುಂಬದಿಂದ ಇನ್ನೊಂದು ಕುಟುಂಬ ಕನಿಷ್ಠ 6 ಅಡಿ ಅಂತರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮಾರಾಟಗಾರರೇ ಮುಂಚಿತವಾಗಿ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.