
ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ ಇಲ್ಲವೇ ಪ್ರತಿಭಟನೆ ನಡೆಸಲು ಅವಕಾಶ ನೀಡಬಹುದು. ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡಬಾರದು’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಒತ್ತಾಯಿಸಿದೆ.
‘ಸಾಂವಿಧಾನಿಕವಾಗಿ ಪಥ ಸಂಚಲನ ಮಾಡುವ ಅಧಿಕಾರ ಇರುವುದು ಪೊಲೀಸ್ ಹಾಗೂ ಇನ್ನಿತರ ರಕ್ಷಣಾ ಪಡೆಗಳಿಗೆ ಮಾತ್ರ. ಆರ್ಎಸ್ಎಸ್ ಮೆರವಣಿಗೆ ಮಾಡಲು ಬಯಸಿದರೆ ಅದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ದೊಣ್ಣೆ ಹಿಡಿದೇ ಮೆರವಣಿಗೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದೇ ಇರುವುದರಿಂದ ಈ ನಡೆಯನ್ನು ಸಮಿತಿ ವಿರೋಧಿಸಲಿದೆ’ ಎಂದು ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ, ಮಾವಳ್ಳಿ ಶಂಕರ್, ವಿ.ನಾಗರಾಜು, ಎನ್.ಮುನಿಸ್ವಾಮಿ, ಎನ್.ವೆಂಕಟೇಶ್ ತಿಳಿಸಿದ್ದಾರೆ.
‘ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಜಾತ್ಯತೀತವನ್ನು ಒಪ್ಪದ ಆರ್ಎಸ್ಎಸ್ ಒಂದೇ ಧರ್ಮದ ಚೌಕಟ್ಟಿನೊಳಗೆ ದೇಶ ಕಟ್ಟುವ ಮಾತನಾಡುತ್ತಿದೆ. ಪಂಚಾಂಗದ ಮೂಲಕ ಆಡಳಿತ ನಡೆಸಲು ಹವಣಿಸುತ್ತಿರುವ ಆರ್ಎಸ್ಎಸ್ನ ಅನಾಗರಿಕ ಪ್ರವೃತ್ತಿ ವಿರುದ್ದ ದನಿ ಎತ್ತಬೇಕಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.