
ಬಂಧನ
ಹನೂರು (ಚಾಮರಾಜನಗರ ಜಿಲ್ಲೆ): ತಾಲೂಕಿನ ದೊಮ್ಮನ ಗದ್ದೆ ಸಮೀಪದ ಜಿ.ಆರ್ ನಗರ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಂಬಕ್ಕೆ ಕಟ್ಟಿ ಥಳಿಸಿದ ಆರೋಪದ ಮೇರೆಗೆ ಮಂಜು ಮತ್ತು ಅಂಗಮುತ್ತು ಎಂಬುವವರನ್ನು ರಾಮಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಣ್ಣಮ್ಮ ಹಲ್ಲೆಗೊಳಗಾದವರು. ಪ್ರಮುಖ ಆರೋಪಿ ಸೆಲ್ವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಲ್ಲೆಯ ಫೋಟೊ, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
‘ತನ್ನ ಜಮೀನಿನಲ್ಲಿ ಬೆಳೆದಿದ್ದ ಹುರುಳಿಯನ್ನು ಸೆಲ್ವಿಯವರ ಜಾನುವಾರುಗಳು ಮೇಯ್ದು, ತುಳಿದು ನಾಶ ಮಾಡಿವೆ ಎಂದು ರಾಮಪುರ ಪೊಲೀಸ್ ಠಾಣೆಗೆ ಕಣ್ಣಮ್ಮ ದೂರು ನೀಡಿದ್ದರು. ಈ ಸಂಬಂಧ ಠಾಣೆಗೆ ಬರುವಂತೆ ಪೊಲೀಸರು ಆರೋಪಿಗೆ ಸೂಚಿಸಿದ್ದರು.
‘ನಾನು ದೂರು ನೀಡಿದ ಬಳಿಕ ಸೆಲ್ವಿ ಮತ್ತು ಸಂಗಡಿಗರು ಮನೆಯಲ್ಲಿದ್ದ ನನ್ನನ್ನು ಹಾಗೂ ನನ್ನ ಮಗ ಪೆರುಮಾಳ್ನನ್ನು ಎಳೆದು ಹೊರತಂದು, ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕಂಬಕ್ಕೆ ಕಟ್ಟಿ ಥಳಿಸಿದರು’ ಎಂದು ಕಣ್ಣಮ್ಮ ಮತ್ತೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಅವರು ರಾಮಪುರ ಠಾಣೆ ಮತ್ತು ಗ್ರಾಮಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.