ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಪುತ್ರಿ ಡಾ.ಸಂಜನಾ ಮತ್ತು ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್ ಪುತ್ರ ವಚನ್ಲಕ್ಷ್ಮಣ್ ವಿವಾಹವನ್ನು ನಿಗದಿಯಂತೆ ಇದೇ 19ರಂದು ಅತ್ಯಂತ ಸರಳವಾಗಿ ಕಾಫಿ ತೋಟದಲ್ಲಿ ಬಂಧುಗಳ ಸಮ್ಮುಖದಲ್ಲಿ ನೆರವೇರಿಸಲು ನಿಶ್ಚಯಿಸಲಾಗಿದೆ. ಕೊರೊನಾ ವೈರಸ್ ಭೀತಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ವಿವಾಹ ಸ್ಥಳವನ್ನು ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಿಂದ ಬಾಸಾಪುರ ಎಸ್ಟೇಟ್ಗೆ ಬದಲಾಯಿಸಲಾಗಿದೆ. ಬಹಳಷ್ಟು ಮಂದಿಗೆ ಆಮಂತ್ರಣ ನೀಡಲಾಗಿತ್ತು. ಬದಲಾದ ಪರಿಸ್ಥಿತಿಯಿಂದಾಗಿ ಎಲ್ಲ ಸ್ನೇಹಿತರು, ಹಿತೈಷಿಗಳು ಇರುವಲ್ಲಿಂದಲೇ ವಧು–ವರರನ್ನು ಹಾರೈಸಬೇಕು’ ಎಂದು ಶಾಸಕ ಟಿ.ಡಿ. ರಾಜೇಗೌಡ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.
ಮದುವೆಗೆ ಬರಬೇಡಿ(ಸಿಂದಗಿ ,ವಿಜಯಪುರ): ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಅವರು, ಮಗಳ ಅದ್ಧೂರಿ ವಿವಾಹವನ್ನು ರದ್ದುಗೊಳಿಸಿ, ಸರಳವಿವಾಹಕ್ಕೆ ಮುಂದಾಗಿದ್ದಾರೆ.
ಡಾ.ಪ್ರೀತಿ ವಿವಾಹವು ಡಾ.ಪ್ರೇಮಸಾಗರ್ ಜೊತೆಗೆ ಇದೇ 19 ರಂದು ವಿಜಯಪುರದಲ್ಲಿ ನಡೆಯಬೇಕಿತ್ತು. ಕೊರೊನಾ ಭೀತಿಯಿಂದಾಗಿ ಸರ್ಕಾರದ ಸೂಚನೆಯ ಮೇರೆಗೆ ವಿವಾಹ ಸಮಾರಂಭವನ್ನು ಕುಟುಂಬದ ಸದಸ್ಯರನ್ನೊಳಗೊಂಡು ವೀರಶೈವ ಲಿಂಗಾಯತ ಧರ್ಮದಂತೆ ಶಾಸ್ತ್ರೋಕ್ತವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರಮೇಶ್ ಅವರು ತಿಳಿಸಿದ್ದಾರೆ.
8-10 ಸಾವಿರದಷ್ಟು ವಿವಾಹ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.