ಬೆಂಗಳೂರು: ‘ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಭಾನುವಾರದಿಂದ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಬಸ್ ಪ್ರಯಾಣ ದರದಲ್ಲೇ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಪ್ರತಿಭಟನಾ ನಿರತ ನೌಕರರ ಜತೆ ಚರ್ಚೆ, ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ನಾನು ರಾತ್ರಿ 12 ಗಂಟೆವರೆಗೂ ಕಾಯಲು ಸಿದ್ಧ. ಹೀಗಾಗಿ ಮೊದಲು ಕೆಲಸಕ್ಕೆ ಹಾಜರಾಗಿ ಮಾತುಕತೆಗೆ ಬನ್ನಿ. ನೌಕರರ ಸಮಸ್ಯೆ ಹಾಗೂ ಅಹವಾಲುಗಳನ್ನು ಸಹಾನುಭೂತಿಯಿಂದ ಪರಿಗಣಿಸಲು ಸರ್ಕಾರ ಸಿದ್ದವಿದೆ’ ಎಂದು ಮುಷ್ಕರನಿರತರನ್ನು ಉದ್ದೇಶಿಸಿ ಸವದಿ ಹೇಳಿದರು.
‘ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಎಲ್ಲಿ ಹೋರಾಟ ನಡೆದರೂ ಹೋಗುತ್ತಿದ್ದಾರೆ. ಆ ಬಗ್ಗೆ ನಾನು ಎಲ್ಲಿಯೂ ಚರ್ಚೆ ಮಾಡಲು ಹೋಗಲ್ಲ. ಅವರು ರಾಜಕಾರಣ ಮಾಡಲಿ. ನಾವು ಜನರ ಸಮಸ್ಯೆ ಪರಿಹಾರದ ಕಡೆ ಗಮನ ಹರಿಸುತ್ತೇವೆ’ ಎಂದೂ ಹೇಳಿದರು.
ಇದನ್ನೂ ಓದಿ... ನಾವು ನಿಮ್ಮ ಜೊತೆ ಇದ್ದೇವೆ: ಸಾರಿಗೆ ನೌಕರರಿಗೆ ಡಿಕೆಶಿ ಭರವಸೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.