ಮೈಸೂರು: ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ರಾಜ್ಯ ಹೆದ್ದಾರಿ 57 ರಲ್ಲಿದ್ದ ಮಹದೇವಮ್ಮ ದೇವಾಲಯವನ್ನು ಕೆಡವಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ, ‘ಹಿಂದೂ ದೇವಾಲಯಗಳಷ್ಟೇ ಕಾಣಿಸುತ್ತವೆಯೇ’ ಎಂದು ಆಕ್ಷೇಪಿಸಿದ್ದ ಸಂಸದ ಪ್ರತಾಪಸಿಂಹ ಅವರ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ‘ನಾವೇನು ಬಳೆ ತೊಟ್ಟುಕೊಂಡಿಲ್ಲ’ ಎಂದು ಪ್ರತಿ ಹೇಳಿಕೆ ನೀಡಿದ್ದು ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ಕೆಲವರು
ಟೀಕಿಸಿದ್ದಾರೆ.
ದೇವಾಲಯ ಧ್ವಂಸವನ್ನು ಖಂಡಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ’ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆಗೆ ಸರ್ಕಾರವೇ ಹೊಣೆ’ ಎಂದಿದ್ದಾರೆ.
ಟ್ವೀಟ್ಗೆ ಪ್ರತಿಕ್ರಿಯಿಸಿರುವ ಲಕ್ಷ್ಮಣ್ ಕಾರ್ಕಳ್, ‘ತನಿಖೆ ಆಗಬೇಕು ಸರ್. ಯಾರು ಪರವಾನಗಿ ಕೊಟ್ರು? ಯಾಕೆ ಕೆಡವಿದರು ಎಂದು ತನಿಖೆ ಆಗಲೇಬೇಕು. ಬೇರೆ ಸರ್ಕಾರ ಇದ್ದಾಗ ಆಗಿದ್ದರೆ ಇವರು ಸುಮ್ಮನೆ ಇರುತ್ತಿದ್ದರೆ’ ಎಂದು ಪ್ರಶ್ನಿಸಿದ್ದಾರೆ.
‘ಕಾಂಗ್ರೆಸ್ಗೆ ನಿಜವಾಗಲೂ ಕಾಳಜಿ ಇದ್ದರೆ ದೇವಾಲಯಗಳನ್ನು ರಕ್ಷಿಸಿ ಆಂದೋಲನವನ್ನು ಆರಂಭಿಸಲಿ. ಅದು ದೇಶಕ್ಕೆ ಈಗಾಗಲೇ ದೊಡ್ಡ ಹಾನಿಗಳನ್ನು ಮಾಡಿದೆ. ಇದೊಂದು ಕಣ್ಣೊರೆಸುವ ಪ್ರಯತ್ನವಷ್ಟೇ’ ಎಂದು ಮಹೇಶ್ ಪಾಟೀಲ್ ಟೀಕಿಸಿದ್ದಾರೆ.
‘ಬಿಜೆಪಿಯವರು ನಾವು ಹಿಂದೂ ಎಂದು ಬಾಯಿ ಬಡೀತಾರೆ. ಆದ್ರೆ ನಿಜವಾಗಿಯೂ ಹಿಂದೂ ವಿರೋಧಿ ಎಂದು ಸಾಬೀತಾಗಿದೆ’ ಎಂದು ಮೈಸೂರಿನ ಗಂಗರಾಜು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.