ADVERTISEMENT

ಅಕಾಲಿಕ ಮಳೆ; ರಾಜ್ಯದಲ್ಲಿ ಡೆಂಗಿ ಪ್ರಕರಣ ಹೆಚ್ಚಳ

ಅಕಾಲಿಕ ಮಳೆಯಿಂದಾಗಿ ಡೆಂಗಿ ಪೀಡಿತರ ಸಂಖ್ಯೆ ಏರುಗತಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:22 IST
Last Updated 16 ಮೇ 2022, 19:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ ಕಳೆದ ವರ್ಷ ನಿಯಂತ್ರಣದಲ್ಲಿದ್ದ ಡೆಂಗಿ ‍ಪ್ರಕರಣಗಳು, ಈ ವರ್ಷ ಅಕಾಲಿಕ ಮಳೆಯಿಂದಾಗಿ ಏರುಗತಿ ಪಡೆದುಕೊಂಡಿವೆ.ಒಂದೂವರೆ ತಿಂಗಳಲ್ಲಿ 461 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 300ಕ್ಕೂ ಅಧಿಕ ಮಂದಿ ಡೆಂಗಿ ಜ್ವರಕ್ಕೆ ಒಳಗಾಗಿದ್ದಾರೆ. ಈ ವರ್ಷ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. 2021ರಲ್ಲಿ 7,189 ಮಂದಿ ಡೆಂಗಿ ಪೀಡಿತರಾಗಿದ್ದರು. ಅವರಲ್ಲಿ ಐವರು
ಮೃತಪಟ್ಟಿದ್ದರು.

ಈ ವರ್ಷಐದೂವರೆ ತಿಂಗಳಲ್ಲಿ ಡೆಂಗಿ ಜ್ವರಕ್ಕೆ ಒಳಗಾದವರ ಸಂಖ್ಯೆ1,400ಕ್ಕೆ ತಲುಪಿದೆ. ಪ್ರಕರಣಗಳ ಸಂಖ್ಯೆ ಮೂರು ಜಿಲ್ಲೆಗಳಲ್ಲಿ ಮೂರಂಕಿ, 20 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.

ADVERTISEMENT

ಉಡುಪಿಯಲ್ಲಿ 150, ಮೈಸೂರಿನಲ್ಲಿ 127, ಕೊಪ್ಪಳದಲ್ಲಿ 87, ಚಿತ್ರದುರ್ಗದಲ್ಲಿ 79, ಬಳ್ಳಾರಿಯಲ್ಲಿ 76, ವಿಜಯಪುರದಲ್ಲಿ 56, ದಾವಣಗೆರೆಯಲ್ಲಿ 51, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ತಲಾ 48, ಕೋಲಾರದಲ್ಲಿ 35, ರಾಯಚೂರು ಹಾಗೂ ತುಮಕೂರಿನಲ್ಲಿ ತಲಾ 30, ಯಾದಗಿರಿಯಲ್ಲಿ 25, ಹಾವೇರಿ ಹಾಗೂ ಬಾಗಲಕೋಟೆಯಲ್ಲಿ ತಲಾ 24 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 20ಕ್ಕಿಂತ ಕಡಿಮೆ ಇವೆ.

25 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು,320 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕೋಲಾರದಲ್ಲಿ 55, ವಿಜಯಪುರದಲ್ಲಿ 52, ಬೆಂಗಳೂರು ಗ್ರಾಮಾಂತರದಲ್ಲಿ 35,ತುಮಕೂರಿನಲ್ಲಿ 33, ಚಿತ್ರದುರ್ಗದಲ್ಲಿ 22, ದಾವಣಗೆರೆಯಲ್ಲಿ 17 ಹಾಗೂ ರಾಮನಗರದಲ್ಲಿ 13 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆ ಇವೆ.

‘ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆ ಸೊಳ್ಳೆಗಳ ಕಡಿತದಿಂದ ಡೆಂಗಿ ಜ್ವರ ಬರುತ್ತದೆ. ಅಕಾಲಿಕ ಮಳೆಯಿಂದ ಈ ಜ್ವರ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಸ್ವಚ್ಛತೆ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.