ADVERTISEMENT

ಹಾವಿನ ವಿಷಕ್ಕೆ ಐಐಎಸ್‌ಸಿ ಪ್ರತಿಕಾಯ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 0:30 IST
Last Updated 27 ಫೆಬ್ರುವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಅತ್ಯಂತ ವಿಷಪೂರಿತ ಹಾವುಗಳ ವಿಷವನ್ನು ಶಮನಮಾಡುವ ಸಿಂಥೆಟಿಕ್ ಪ್ರತಿಕಾಯವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ನಾಗರಹಾವು, ಕಾಳಿಂಗ ಸರ್ಪ, ಕಟ್ಟು ಹಾವು (ಕ್ರೈಟ್‌) ಮತ್ತು ಬ್ಲಾಕ್‌ ಮಾಂಬದಂತಹ ಅತಿ ವಿಷಕಾರಿ ಹಾವುಗಳು ಮನುಷ್ಯನನ್ನು ಕಡಿದಾಗ ನರನಾಡಿಗಳಲ್ಲಿ ಅತಿ ಬೇಗನೆ ವಿಷ ಏರುತ್ತದೆ. 
ಸಿಂಥೆಟಿಕ್ ಪ್ರತಿಕಾಯ ಆ ವಿಷವನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಕಟಣೆ ತಿಳಿಸಿದೆ.

ADVERTISEMENT

ಐಐಎಸ್‌ಸಿಯ ಸೆಂಟರ್‌ ಫಾರ್‌ ಎಕಲಾಜಿಕಲ್‌ ಸೈನ್ಸಸ್‌ನಲ್ಲಿರುವ ಎವಲ್ಯೂಷನರಿ ವೆನೋಮಿಕ್ ಲ್ಯಾಬ್‌ ಮತ್ತು ಸ್ಕ್ರಿಪ್ಸ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ನ ತಂಡ ಈ ಪ್ರತಿಕಾಯವನ್ನು
ಅಭಿವೃದ್ಧಿಪಡಿಸಿದೆ. ಕೋವಿಡ್‌–19 ಮತ್ತು ಎಚ್ಐವಿ ಪ್ರತಿಕಾಯಗಳನ್ನು ಪರೀಕ್ಷಿಸಲು ಬಳಸಲಾಗಿದ್ದ ವಿಧಾನಗಳನ್ನೇ ಇದಕ್ಕೂ ಅಳವಡಿಸಿಕೊಳ್ಳಲಾಗಿದೆ.

ಈ ಕುರಿತು ಮಾತನಾಡಿರುವ ಪಿಎಚ್‌ಡಿ ವಿದ್ಯಾರ್ಥಿ ಸೆನ್ಜಿ ಲಕ್ಷ್ಮಿ, ‘ಹಾವುಗಳ ಕಡಿತಕ್ಕೆ ಚಿಕಿತ್ಸೆಗಾಗಿ ಮೊದಲ ಬಾರಿಗೆ ಪ್ರತಿಕಾಯವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ಹಾವುಗಳ ಕಡಿತದಿಂದ ಭಾರತ
ಮತ್ತು ಸಬ್ ಸಹರನ್ ಆಫ್ರಿಕಾದಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಹಾವಿನ ವಿಷವನ್ನು ಕುದುರೆ, ಕುದುರೆ ಮರಿ, ಹೆಸರಗತ್ತೆಗಳ ದೇಹಕ್ಕೆ ಸೇರಿಸಿ, ಅವುಗಳ ರಕ್ತದಿಂದ ಪ್ರತಿಕಾಯ
ವನ್ನು ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಸಹ ಪ್ರಾಧ್ಯಾಪಕ ಕಾರ್ತಿಕ್‌ ಸುಣಗಾರ್ ಅವರ ಪ್ರಕಾರ, ‘ಈ ಪ್ರಾಣಿಗಳು ತಮ್ಮ ಜೀವಿತಾವಧಿ
ಯಲ್ಲಿ ಸಾಕಷ್ಟು ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ತೆರೆದುಕೊಳ್ಳುತ್ತವೆ. ಇದರಿಂದಾಗಿ ಪ್ರತಿವಿಷಗಳು ಸೂಕ್ಷ್ಮಾಣುಜೀವಿಗಳ ವಿರುದ್ಧ ಚಿಕಿತ್ಸೆಯ ಪ್ರತಿಕಾಯವನ್ನು ಹೊಂದಿರುತ್ತವೆ. ಒಂದು ವಯಲ್‌ನಷ್ಟು ಪ್ರತಿ ವಿಷದಲ್ಲಿ ಶೇ 10ಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಹಾವಿನ ವಿಷ ಶಮನ ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ’.

‘ಅಭಿವೃದ್ಧಿಪಡಿಸಿದ ಪ್ರತಿಕಾಯವನ್ನು ಪ್ರಾಣಿಗಳ ಮೇಲೆ ಪರೀಕ್ಷಿಸಲಾಯಿತು. ಮೊದಲಿಗೆ ತೈವಾನ್‌ನ ಪಟ್ಟೆ ಕಟ್ಟು ಹಾವಿನ ವಿಷ 3 ಎಫ್‌ಟಿಎಕ್ಸ್‌ ಜತೆ ಮಿಶ್ರಣ ಮಾಡಿ ಅದನ್ನು ಇಲಿಗಳ ದೇಹಕ್ಕೆ ಸೇರಿಸಲಾಯಿತು. 24 ಗಂಟೆಗಳ ಬಳಿಕವೂ ಈ ಇಲಿಗಳು ಬದುಕುಳಿದವು. ಕೇವಲ ವಿಷವನ್ನು ಸೇರಿಸಿದ್ದ ಇಲಿಗಳು ಕೆಲವೇ ಗಂಟೆಗಳಲ್ಲಿ ಸತ್ತು ಹೋದವು. ಇದೇ ರೀತಿಯಲ್ಲಿ ಬೇರೆ ಬೇರೆ ವಿಷಪೂರಿತ ಹಾವಿನ ವಿಷಗಳ ವಿರುದ್ಧವೂ ಪ್ರತಿಕಾಯವನ್ನು ಪರೀಕ್ಷಿಸಿ, ಉತ್ತಮ ಫಲಿತಾಂಶವೇ ಲಭಿಸಿದೆ’ ಎಂದಿದ್ದಾರೆ.

ಸಂಶೋಧಕರು ಪ್ರತಿಕಾಯವನ್ನು ಸೃಷ್ಟಿಸಲು ವಿಷವನ್ನು ಕುದುರೆಯಂತಹ ಪ್ರಾಣಿಗಳಿಗೆ ಚುಚ್ಚುವ ಬದಲಿಗೆ ಮನುಷ್ಯ ಶರೀರದಿಂದ ತೆಗೆಯಲಾದ ಜೀವಕೋಶ ಗಳನ್ನೇ ಬಳಸಲಾಗಿತ್ತು. ಪ್ರತಿಕಾಯವು ಸಂಪೂರ್ಣವಾಗಿ ಮನುಷ್ಯನ ಜೀವಕೋಶಗಳಿಂದಲೇ ಸೃಜನೆಯಾಗಿರುವುದರಿಂದ ಯಾವುದೇ ರೀತಿಯ ಅಲರ್ಜಿ ಉಂಟಾಗುವ ಸಾಧ್ಯತೆ ಇಲ್ಲ ಎಂದು ಸುಣಗಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.