ADVERTISEMENT

ಆರೋಪಿಗಳಿಗೆ ಜಾಮೀನು: ಚಡಚಣ ಸೋದರರ ತಾಯಿಯ ಆತಂಕ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:44 IST
Last Updated 26 ಏಪ್ರಿಲ್ 2019, 19:44 IST

ವಿಜಯಪುರ:ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌ ಹಾಗೂ ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದಕ್ಕೆ, ಕೊಲೆಯಾದ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನಿಬ್ಬರು ಮಕ್ಕಳನ್ನು ಕೊಲೆಗೈದ ಮಹಾದೇವ ಭೈರಗೊಂಡ, ಪಿಎಸ್‌ಐ ಗೋಪಾಲ ಹಳ್ಳೂರಗೆ ಕಲಬುರ್ಗಿ ಹೈಕೋರ್ಟ್‌ ಜಾಮೀನು ನೀಡಿದೆ. ಇವರಿಂದ ನನಗೆ ಜೀವಭಯವಿದೆ’ ಎಂದು ವಿಮಲಾಬಾಯಿ ಚಡಚಣ ಅಜ್ಞಾತ ಸ್ಥಳದಿಂದ ವಿಡಿಯೊ ಕ್ಲಿಪ್ಪಿಂಗ್‌ ಮೂಲಕ ತಿಳಿಸಿದ್ದಾರೆ.

‘ಮಹಾದೇವನಿಗೆ ದುಡ್ಡಿನ ಬಲವಿದೆ. ರಾಜಕಾರಣಿಗಳ ಬೆಂಬಲವಿದೆ. ಇನ್ಮುಂದೆ ನಾನು ನ್ಯಾಯಾಲಯದ ಕೆಲಸಕ್ಕೂಹೋಗಿ ಬರುವುದು ಕಷ್ಟವಿದೆ. ಯಾವ ಸಂದರ್ಭ ಬೇಕಾದರೂ ನನ್ನ ಹತ್ಯೆಗೈಯಬಹುದು’ ಎಂದು ವಿಮಲಾಬಾಯಿ ವಿಡಿಯೊದಲ್ಲಿ ಭಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನನಗೆ ನ್ಯಾಯ ಸಿಗದಾಗಿದೆ. ತಮ್ಮ ರೊಕ್ಕ, ಅಧಿಕಾರದ ಪ್ರಭಾವ ಬಳಸಿಕೊಂಡು ಮಹಾದೇವ ಸಾಕ್ಷ್ಯ ನಾಶ ಪಡಿಸುತ್ತಾನೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.