ADVERTISEMENT

ಸಾವರ್ಕರ್‌ ಬ್ರಿಟಿಷರ ಕ್ಷಮೆ ಕೋರಿದ್ದರು: ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 14:39 IST
Last Updated 19 ಅಕ್ಟೋಬರ್ 2019, 14:39 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಮಂಡ್ಯ: ‘ಸಾವರ್ಕರ್‌ ಅವರು ಬ್ರಿಟಿಷರ ಕ್ಷಮೆ ಕೋರಿ ಜೈಲಿನಿಂದ ಹೊರಬಂದಿದ್ದರು. ಬಿಡುಗಡೆಯಾದ ನಂತರ ಅವರು ಸ್ವಾತಂತ್ರ್ಯ ಹೋರಾಟ ಮುಂದುವರಿಸಲಿಲ್ಲ. ಇಂಥವರಿಗೆ ಭಾರತ ರತ್ನ ಕೊಡಬೇಕಾ ಎಂಬುದೇ ನಮ್ಮ ವಾದ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶನಿವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೈಲು ಶಿಕ್ಷೆಅನುಭವಿಸಿದ ಭಗತ್‌ಸಿಂಗ್‌, ಸರ್ದಾರ್‌ ವಲಭಾಬಾಯ್‌ ಪಟೇಲ್‌, ಮಹಾತ್ಮ ಗಾಂಧಿ, ನೆಹರೂ ಇವರಾರೂ ಬ್ರಿಟಿಷರ ಕ್ಷಮೆ ಕೇಳಲಿಲ್ಲ. ಆದರೆ ಸಾವರ್ಕರ್‌, ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಶರಣಾಗುತ್ತೇನೆ, ಆಡಳಿತಕ್ಕೆ ಬೆಂಬಲ ನೀಡುತ್ತೇನೆ, ನಿಮ್ಮಿಂದ ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ಬರೆದುಕೊಟ್ಟಿದ್ದರು. ನಂತರ ಅವರ ಬ್ರಿಟಿಷರ ಪರ ಕೆಲಸ ಮಾಡಿದರು’ ಎಂದರು.

ಚುನಾವಣೆ ಬಂದರೆ ಎದುರಿಸಲು ಸಿದ್ಧ: ‘ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿ ಅವರ ಬಳಿ ಏನು ಕೇಳಿದರೂ ಹಣ ಇಲ್ಲ, ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಸಾರ್ವತ್ರಿಕ ಚುನಾವಣೆ ಬಂದರೆ ಎದುರಿಸಲು ನಾವು ಸಿದ್ಧರಿದ್ದೇವೆ’ ಎಂದರು.

‘ಉಪ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ಆಗಿದೆ. ಕಾಂಗ್ರೆಸ್‌ ಇನ್ನು ಮುಂದೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಹಿಂಸೆಯಿಂದ, ಭಯ ಸೃಷ್ಟಿಸಿ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಅದರ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.