ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಲೋಕಸಭಾ ಚುನಾವಣೆ ಮೇಲೆ ಇದೆ. ಪುಲ್ವಾಮಾದಲ್ಲಿನ ಉಗ್ರರ ದಾಳಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಮತಗಳಿಸುವುದು ಹೇಗೆ ಎಂಬ ಯೋಚನೆ ಅವರಲ್ಲಿದೆ. ಹಾಗಾಗಿಯೇ ದಾಳಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ವಿಷಯಗಳಲ್ಲಿ ಹೀಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾತನಾಡುತ್ತಿದ್ದಾರೆ. ನಿರ್ದಿಷ್ಟ ದಾಳಿ ನಡೆಸಿ ಪ್ರಚಾರ ಪಡೆದುಕೊಂಡರಷ್ಟೇ. ಇವರು ಪಾಕಿಸ್ತಾನವನ್ನು ಏನಾದ್ರೂ ಮಟ್ಟ ಹಾಕಿದರಾ? ಹಾಗೆ ನೋಡಿದರೆ ಮೋದಿ ಸರ್ಕಾರದ ಅವಧಿಯಲ್ಲೇ ಆತಂಕವಾದಿಗಳ ಉಪಟಳ ಹೆಚ್ಚಾಗಿದೆ ಎಂದು ಗುಂಡೂರಾವ್ ದೂರಿದರು.
ದೇಶದಲ್ಲಿ ಇರುವ ಪ್ರತಿಯೊಬ್ಬರೂ ದೇಶ ಪ್ರೇಮಿಗಳೇ. ಆದರೆ, ಬಿಜೆಪಿಯವರು ಮಾತೆತ್ತಿದರೆ ನಾವೇ ದೇಶ ಪ್ರೇಮಿಗಳು ಎನ್ನುತ್ತಾರೆ. ಕೆಲ ಸಂಘಟನೆಗಳಂತೂ ದೇಶಪ್ರೇಮವನ್ನು ಗುತ್ತಿಗೆಗೆ ತೆಗೆದುಕೊಂಡತೆ ವರ್ತಿಸುತ್ತಿವೆ. ಈ ಮೂಲಕ ದೇಶದಲ್ಲಿ ದ್ವೇಷದ ವಾತಾವರಣ ಮೂಡಿಸುತ್ತಿವೆ ಎಂದೂ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.