ADVERTISEMENT

ಅಧಿಕಾರಿಗಳ ಜತೆ ಚರ್ಚೆ; ವಿಧಾನಮಂಡಲ ಅಧಿವೇಶನ ಕರೆಯಲು ಕಾಗೇರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 10:16 IST
Last Updated 6 ಆಗಸ್ಟ್ 2020, 10:16 IST
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ಕೋವಿಡ್‌–19ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸೆಪ್ಟಂಬರ್‌ 23 ರೊಳಗೆ ವಿಧಾನಮಂಡಲದ ಅಧಿವೇಶನ ನಡೆಸುವುದು ಹೇಗೆಂಬ ಚಿಂತೆ ಕಾಡಿದೆ.

ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಕಾಗೇರಿ ಅವರು ಗುರುವಾರ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಸಭೆ ನಡೆಸಿದರು. ಕಳೆದ ಮಾರ್ಚ್‌ನಲ್ಲಿ ಅಧಿವೇಶನ ನಡೆದಿತ್ತು. ಇದಾದ ಆರು ತಿಂಗಳಲ್ಲಿ ಮತ್ತೊಮ್ಮೆ ಅಧಿವೇಶನ ಕರೆಯಬೇಕಾಗಿರುವುದರಿಂದ ಕಾಗೇರಿ ವಿಸ್ತೃತ ಚರ್ಚೆ ನಡೆಸಿದರು.

ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ಸೋಂಕು ಹರಡದಂತೆ ಆರೋಗ್ಯ ಕಾಪಾಡಿಕೊಂಡು ಸದನ ನಡೆಸುವ ಸಂಬಂಧ ವಿಧಾನಸಭಾ ಸಭಾಂಗಣದ ಆಸನ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿರುವುದಾಗಿ ಸಭೆಯ ಬಳಿಕ ಕಾಗೇರಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಒಂದು ವೇಳೆ ಅಧಿವೇಶನ ವಿಧಾನಸಭೆಯ ಸಭಾಂಗಣದಲ್ಲಿ ನಡೆಸಲು ಆಗದೇ ಹೋದರೆ, ಪರ್ಯಾಯವಾಗಿ ಎಲ್ಲಿ ನಡೆಸಬಹುದು, ಅಂತಹ ಸೂಕ್ತ ಸ್ಥಳಗಳು ಎಲ್ಲಿವೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ವಿಧಾನಸಭಾ ಸಭಾಂಗಣದಲ್ಲಿ ಎಲ್ಲ ಆಸನಗಳಿಗೂ ಗಾಜಿನ ಕವಚಗಳನ್ನು ಅಳವಡಿಸುವುದು, ಸದನಕ್ಕೆ ಬರುವ ಶಾಸಕರು, ಸಚಿವರು, ಅಧಿಕಾರಿಗಳಿಗೆ ಕಡ್ಡಾಯವಾಗಿ ಮುಖಗವುಸು ಒದಗಿಸುವುದು ಮತ್ತು ಮುಖ ರಕ್ಷಕಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕಲಾಪಕ್ಕೆ ಹಾಜರಾಗುವಂತೆ ವಿನಂತಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ಕಾಗೇರಿ ತಿಳಿಸಿದರು.

ಲೋಕಸಭೆ, ರಾಜ್ಯಸಭೆ ಮತ್ತು ಇತರ ರಾಜ್ಯಗಳಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತನ್ನು ನಡೆಸಲು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜತೆಗೆ ಈ ಕುರಿತು ಸಮಾಲೋಚನೆ ನಡೆಸಿ ಸ್ಥಳ ತೀರ್ಮಾನ ಮಾಡುವುದಾಗಿ ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.