ADVERTISEMENT

ಅತೃಪ್ತರ ಮೂಲ ಉದ್ದೇಶಕ್ಕೇ ಪೆಟ್ಟು ಕೊಟ್ಟ ಸ್ಪೀಕರ್‌ ತೀರ್ಪು

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 8:01 IST
Last Updated 28 ಜುಲೈ 2019, 8:01 IST
   

ಬೆಂಗಳೂರು: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಭಾನುವಾರ ನೀಡಿದ ಅನರ್ಹತೆ ತೀರ್ಪು ಭಿನ್ನಮತೀಯ ಶಾಸಕರ ಸಚಿವರಾಗುವ ಆಸೆಗೆ ಭಂಗ ತಂದಿದೆ.

ಸರ್ಕಾರದ ಕಾರ್ಯವೈಖರಿ ಸರಿಯಿಲ್ಲ, ನಾಯಕರ ವರ್ತನೆ ಸಹಿಸಲಾಗುತ್ತಿಲ್ಲ ಎಂದೆಲ್ಲ ಕಾರಣ ನೀಡಿದ್ದ ಭಿನ್ನಮತೀಯ ಶಾಸಕರ ಬಂಡಾಯದ ಹಿಂದೆ ಸಚಿವರಾಗುವ ಆಸೆ ಇದ್ದದ್ದು ಬಹಿರಂಗ ಸತ್ಯ.ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವುದು, ಆ ಮೂಲಕವೇ ಉಪ ಚುನಾವಣೆ ಎದುರಿಸುವುದು ಭಿನ್ನಮತೀಯರ ಉದ್ದೇಶವಾಗಿತ್ತು. ಆದರೆ, ಸ್ಪೀಕರ್‌ ರಮೇಶ್‌ ಕುಮಾರ್‌ ಎಲ್ಲರನ್ನೂ 10ನೇ ಶೆಡ್ಯೂಲ್‌ನ ಪ್ರಕಾರ ಅನರ್ಹಗೊಳಿಸಿದ್ದಾರೆ. ಹೀಗಾಗಿ164(1ಬಿ) ಪ್ರಕಾರ ಅತೃಪ್ತರನ್ನು ಅವರ ಅನರ್ಹತೆ ಅವಧಿ ಮುಗಿಯು ವರೆಗೆ ಸಚಿವ ಸ್ಥಾನಕ್ಕಾಗಿ,ನಿಗಮ ಮಂಡಳಿಗಳಿಗಾಗಲಿ ನೇಮಕ ಮಾಡುವಂತಿಲ್ಲ.

ಇದರ ಜತೆಗೆ, ಅನರ್ಹ ಅತೃಪ್ತರು 15ನೆ ವಿಧಾನಸಭೆ ಅವಧಿ ಪೂರ್ಣವಾಗುವವರೆಗೆ ಅಂದರೆ, 2023ರ ವರೆಗೆ ಉಪ ಚುನಾವಣೆಗಳಲ್ಲಿ ಸ್ಪರ್ಧಿಸುವುಂತಿಲ್ಲ ಮತ್ತು ಶಾಸನ ಸಭೆಗೆ ಪ್ರವೇಶಿಸುವಂತಿಲ್ಲ. ಒಂದು ವೇಳೆ 15ನೇ ವಿಧಾನಸಭೆ ವಿಸರ್ಜನೆಗೊಂಡು ಮಧ್ಯಂತರ ಚುನಾವಣೆ ಎದುರಾದರೆ, ಇಲ್ಲವೇ ಅತೃಪ್ತರು ಕೋರ್ಟ್‌ ಮೊರೆ ಹೋಗಿ ಅಲ್ಲಿ ಉಪ ಚುನಾವಣೆ ಸ್ಪರ್ಧೆಗೆ ಅವಕಾಶ ದೊರೆತರೆ ಅತೃಪ್ತರು ಚುನಾವಣೆಗೆ ಸ್ಪರ್ಧಿಸಬಹುದು. ಗೆದ್ದರೆ ಸಚಿವರಾಗಬಹುದು. ಆದರೆ, ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯುವವರೆಗಂತೂ ಅವರು ಸಚಿವರಾಗಲು ಸಾಧ್ಯವಿಲ್ಲ. ಹೀಗಾಗಿ ಅತೃಪ್ತರ ಸಚಿವರಾಗುವಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.