ಡಿ.ಕೆ ಶಿವಕುಮಾರ್ ಹಾಗೂ ಇಕ್ಬಾಲ್ ಹುಸೇನ್
ಬೆಳಗಾವಿ (ಸುವರ್ಣ ಸೌಧ): ‘ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ತಕ್ಷಣ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ಡಿ.ಕೆ. ಶಿವಕುಮಾರ್ ಅವರ ಆಪ್ತ, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕ ಆಗಿಲ್ಲವೇ, ಹಾಗೇ ಡಿ.ಕೆ .ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ ಅವರು ಮುಖ್ಯಮಂತ್ರಿ ಆಗುತ್ತಾರೆ. ಗುರುವಾರ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ. ನಮಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ’ ಎಂದರು.
‘ಡಿ.ಕೆ .ಶಿವಕುಮಾರ್ ಕಷ್ಟಪಟ್ಟಿದಕ್ಕೆ ಫಲ ಸಿಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆ ಫಲ ಸಿಗುತ್ತದೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್ನ ನಿರ್ದೇಶನ ಮುಖ್ಯ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ? ಸಂಖ್ಯಾಬಲ ಮುಖ್ಯ ಅಲ್ಲ’ ಎಂದರು.
‘50-60 ಜನರು ಔತಣಕೂಟಕ್ಕೆ ಸೇರಿದ್ದರು. ಆದರೆ, ರಾಜಕೀಯ ಚರ್ಚೆ ಆಗಿಲ್ಲ. ಡಿ.ಕೆ.ಶಿವಕುಮಾರ್ ಕರೆದರೆ ಎಲ್ಲ 224 ಜನ ಶಾಸಕರೂ ಕರೆದರೆ ಊಟಕ್ಕೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದಲ್ಲ. ವಿಶ್ವಾಸ, ಪ್ರೀತಿ ಒಂದು ಬಾಂಧವ್ಯ. ಎಲ್ಲರೂ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರೇ. ಅವರವರ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.