ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಸೆ. 3ರಂದು ಬಂಧನಕ್ಕೆ ಒಳಗಾಗಿ ತಿಹಾರ್ ಕೇಂದ್ರ ಕಾರಾಗೃಹದಲ್ಲಿರುವಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದೆ.
ಅಕ್ಟೋಬರ್ 1, ಮಂಗಳವಾರ ಡಿಕೆಶಿ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಂಡಿತ್ತು.
ಮಂಗಳವಾರ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ ಅಮಿತ್ ಮಹಾಜನ್, ಡಿಕೆ ಶಿವಕುಮಾರ್ನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ನ್ಯಾಯಾಂಗದ ಅನುಮತಿ ಬೇಡಿದ್ದಾರೆ. ಅದೇ ವೇಳೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲು ಮಹಾಜನ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಡಿಕೆಶಿ ಜಾಮೀನು ಅರ್ಜಿ: ಅ.14ಕ್ಕೆ ವಿಚಾರಣೆ
ಶಿವಕುಮಾರ್ ಅವರ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್ನಲ್ಲಿದೆ.
ವಿಚಾರಣೆ ಮಾಡಬಹುದು ಆದರೆ ಅದು ಕಾರಾಗೃಹ ಕೈಪಿಡಿಯ ನಿಬಂಧನೆಗಳಿಗೆ ಅನುಸಾರವಾಗಿರಬೇಕು ಎಂದು ಡಿಕೆಶಿ ಪರ ವಾದಿಸುತ್ತಿರುವ ಹಿರಿಯ ವಕೀಲ ದಯನ್ ಕೃಷ್ಣನ್ ಹೇಳಿದ್ದಾರೆ.ಡಿಕೆಶಿ ನ್ಯಾಯಾಂಗ ಬಂಧನದಲ್ಲಿರುವಾಗ ಜಾರಿ ನಿರ್ದೇಶನಾಲಯದ ಇಡೀ ತಂಡ ಅವರನ್ನು ವಿಚಾರಣೆಗೊಳಪಡಿಸುವಂತಿಲ್ಲ ಎಂದು ಕೃಷ್ಣನ್ ವಾದಿಸಿದ್ದಾರೆ.
ಅಕ್ಟೋಬರ್ 4 ಮತ್ತು 5ರಂದು ಶಿವಕುಮಾರ್ ಅವರನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮೂವರು ತನಿಖಾಧಿಕಾರಿಗಳಿಗೆ ತಿಹಾರ್ ಜೈಲಿನಲ್ಲೇ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.
ವಿಚಾರಣೆ ಮುಗಿಸಿ ಡಿಕೆಶಿ ಅವರನ್ನುಮತ್ತೆ ತಿಹಾರ್ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ನ್ಯಾಯಾಲಯ ಆವರಣದಲ್ಲಿಡಿಕೆಶಿ ಕಾಣಲು ಬಂದಿದ್ದ ನೂರಾರು ಜನ ಬೆಂಬಲಿಗರಿಗೆ ಹಸ್ತಲಾಘವ ಮಾಡಿ, ಕೈಬೀಸಿ ಡಿಕೆಶಿ ಜೈಲಿಗೆ ತೆರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.