
ಡಿ.ಕೆ.ಸುರೇಶ್ ಕನಕಪುರ
ಬೆಂಗಳೂರು: ‘ಪಂಚಾಯಿತಿ ಅಧ್ಯಕ್ಷರೇ ಅಧಿಕಾರ ಬಿಟ್ಟುಕೊಡಲು ಹಿಂದೇಟು ಹಾಕುತ್ತಾರೆ. ನೆಪ ಹೇಳುತ್ತಾರೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುತ್ತದೆಯೇ? ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರಿಗೆ ಸಿಕ್ಕೇ ಸಿಗುತ್ತದೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಅಧಿಕಾರ ಹಾಗೂ ತಾಳ್ಮೆಯೂ ಶಾಶ್ವತವಲ್ಲ. ನಾಲ್ಕು ದಿನ ಅಧ್ಯಕ್ಷನಾಗುತ್ತೇನೆ. ನಂತರ ಮಾಜಿ ಎಂದು ಜನರು ಕರೆಯಲಾದರೂ ಸ್ಥಾನ ಬೇಕು ಎಂದು ಗೋಗರೆದು ಪಂಚಾಯಿತಿ ಅಧ್ಯಕ್ಷರಾದವರೂ ಅವಧಿ ಮುಗಿದ ನಂತರ ನಾನಾ ಸಬೂಬು ಹೇಳುತ್ತಾರೆ. ವ್ಯವಸ್ಥೆಯೇ ಹಾಗೆ ಇದೆ. ಚಿಕ್ಕ ವಯಸ್ಸಿನಿಂದಲೂ ಶಿವಕುಮಾರ್ ಅವರು ಇಂತಹ ಬೆಳವಣಿಗೆಗಳನ್ನು ನೋಡಿಕೊಂಡು ಬಂದಿದ್ದಾರೆ’ ಎಂದರು.
‘ನಾಯಕತ್ವ ಬದಲಾವಣೆಯಾದರೆ ಒಂದು ವರ್ಗದ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲ್ಲ ಎಂದು ಬಿಂಬಿಸುವುದು ಸರಿಯಲ್ಲ. ಎಲ್ಲಾ ವರ್ಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕು. ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಕೆಲವರು ವ್ಯಕ್ತಿಗೆ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ’ ಎಂದು ಹೇಳಿದರು.
‘ಅಧಿಕಾರ ಹಂಚಿಕೆ ವಿಚಾರವಾಗಿ ತಾಳ್ಮೆಯಿಂದ ಇರಲು ಪಕ್ಷ ಹೇಳಿದೆ. ರಾಹುಲ್ ಗಾಂಧಿ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಣ್ಣ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. ಅಧಿಕಾರ ಸುಲಭವಾಗಿ ಬರುವುದಿಲ್ಲ. ನಮ್ಮ ಗುರಿ 2028 ರ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆ ವಹಿಸಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.