ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿ, ವಿಚಾರಣೆ ಎದುರಿಸಿದರು.
ಡಿಕೆಶಿ ಹಾಗೂ ಅವರ ಆಪ್ತರ ವಿರುದ್ಧ ಐ.ಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ 4ನೇ ಪ್ರಾಸಿಕ್ಯೂಷನ್ ವರದಿ ಸಂಬಂಧ ಡಿಕೆಶಿ ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಲ ಹೊತ್ತಿನ ಬಳಿಕ ಇದೇ 20ಕ್ಕೆ ವಿಚಾರಣೆ ಮುಂದೂಡಿದರು.
ಪ್ರಕರಣದಿಂದ ಕೈ ಬಿಡುವಂತೆ ಡಿಕೆಶಿ ಹಾಗೂ ಅವರ ಆಪ್ತರು ಈ ಮೊದಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಹೈಕೋರ್ಟ್ ಆದೇಶ ಪ್ರಶ್ನಿಸಿ ಇತರ ಆರೋಪಿಗಳುಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ವಿಚಾರವನ್ನು ವಕೀಲರು ನ್ಯಾಯಾದೀಶರ ಗಮನಕ್ಕೆ ತಂದರು.
ಮನವಿ ತಿರಸ್ಕೃತ: ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ವಿನಾಯಿತಿ ಕೊಡಬೇಕು ಎಂದು ನ್ಯಾಯಾಧೀಶರ ಮುಂದೆ ವಕೀಲರು ಮನವಿ ಮಾಡಿದರು.
ಇದರಿಂದ ಗರಂ ಆದ ನ್ಯಾಯಾಧೀಶರು, ‘ತಿಂಗಳ ಕಾಲಾವಕಾಶ ಏಕೆ ಬೇಕು ಎಂದು ಕೇಳಿದರು. ಸುಪ್ರೀಂಕೋರ್ಟ್ ಮುಂದಿನ ವಾರ ವಿಚಾರಣೆ ನಡೆಸುವುದರಿಂದ ಡಿ.20ಕ್ಕೆ ನಾವು ಸಾಕ್ಷಿಗಳನ್ನು ವಿಚಾರಣೆ ನಡೆಸಲು ಅಡ್ಡಿಯಿಲ್ಲ. ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದರು.
ಶಿವಕುಮಾರ್ 2016– 17ನೇ ಸಾಲಿನಲ್ಲಿ ತಮ್ಮ ಆಸ್ತಿಗೆ ಸರಿಯಾದ ತೆರಿಗೆ ಪಾವತಿಸದ ಆರೋಪಕ್ಕೆ ಒಳಗಾಗಿದ್ದಾರೆ. ಐ.ಟಿ ಈ ಕಾರಣಕ್ಕೆ 2017ರ ಆಗಸ್ಟ್ 2ರಂದು ಶಿವಕುಮಾರ್ ಅವರ ಸದಾಶಿವನಗರದ ಮನೆ, ದೆಹಲಿಯ ಸಫ್ದರ್ಜಂಗ್ ಎನ್ಕ್ಲೇವ್ನಲ್ಲಿರುವ ಫ್ಲ್ಯಾಟ್ ಮತ್ತು ಇದೇ ಎನ್ಕ್ಲೇವ್ನಲ್ಲಿರುವ ಅವರ ಆಪ್ತರ ಮನೆಗಳಲ್ಲದೆ, ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿತ್ತು.
ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಮಯದಲ್ಲಿ ‘ಕುದುರೆ ವ್ಯಾಪಾರ’ ತಪ್ಪಿಸಲು ಅಲ್ಲಿನ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ಗೆ ಕರೆತಂದು ಇಟ್ಟಿದ್ದ ವೇಳೆಯಲ್ಲೇ ಈ ದಾಳಿ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.