ADVERTISEMENT

ಸಾರಿಗೆ ನಿಗಮದ ಖಾಸಗೀಕರಣ ಚಿಂತನೆ ಕೈಬಿಡಿ: ರಾಮಲಿಂಗಾ ರೆಡ್ಡಿ, ರೇವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 8:49 IST
Last Updated 12 ಏಪ್ರಿಲ್ 2021, 8:49 IST
ಕಾಂಗ್ರೆಸ್‌ ಮುಖಂಡರಾದ ಎಚ್‌.ಎಂ. ರೇವಣ್ಣ, ರಾಮಲಿಂಗಾ ರೆಡ್ಡಿ
ಕಾಂಗ್ರೆಸ್‌ ಮುಖಂಡರಾದ ಎಚ್‌.ಎಂ. ರೇವಣ್ಣ, ರಾಮಲಿಂಗಾ ರೆಡ್ಡಿ    

ಬೆಂಗಳೂರು: ‘ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡುವ ಉದ್ದೇಶವೇನಾದರೂ ರಾಜ್ಯ ಸರ್ಕಾರಕ್ಕೆ ಇದೆಯೇ? ಹಾಗೇನಾದರೂ ಇದ್ದರೆ ಆ ಆಲೋಚನೆ ಕೈಬಿಡಲಿ’ ಎಂದು ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಇನ್ನೊಬ್ಬ ಮುಖಂಡರಾದ ಎಚ್‌.ಎಂ. ರೇವಣ್ಣ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಪೈಕಿ ಯಾವುದು ಆಗುತ್ತದೆ, ಯಾವುದು ಆಗಲ್ಲವೆಂದು ಸರ್ಕಾರ ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ನೋಡೋಣ, ಮಾಡೋಣ ಎಂದು ಹೇಳಿದ್ದರಿಂದ ಇಂದು ಹೀಗಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮುಷ್ಕರನಿರತ ನೌಕರರನ್ನು‌ ಕರೆದು ಮಾತನಾಡಲಿ. ಮುಖ್ಯಮಂತ್ರಿ ತಂದೆ ಇದ್ದಂತೆ. ನೌಕರರು‌ ಮಕ್ಕಳಿದ್ದಂತೆ. ಬೇಡಿಕೆಗಳೆಲ್ಲವನ್ನೂ ಈಡೇರಿಸಲು ಆಗಲ್ಲ ನಿಜ. ಆದರೆ, ಅದನ್ನು ಹೇಳಬೇಕು. ಆರನೇ ವೇತನ ಆಯೋಗದ ಪ್ರಕಾರ ಕೊಡಲು ಆಗಲ್ಲ ಅಂತ ಹೇಳಬೇಕಿತ್ತು. ಸರ್ಕಾರ ಪ್ರತಿಷ್ಟೆ ಬಿಟ್ಟು ನೌಕರರ ಜೊತೆ ಮಾತುಕತೆ ನಡೆಸಲಿ’ ಎಂದು ಸಲಹೆ ನೀಡಿದರು.

ADVERTISEMENT

‘ಕೆಎಸ್‌ಆರ್‌ಟಿಸಿ ನೌಕರರು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತ ಬೇಡಿಕೆ ಮುಂದಿಟ್ಟಾಗ ಆಗಲ್ಲ ಎಂದಾದರೆ ಆಗಲ್ಲ ಎಂದೇ ಹೇಳಬೇಕಿತ್ತು.ಆದರೆ, ನೋಡೋಣ ಮಾಡೋಣ ಅಂದರು. ಆರನೇ ವೇತನ ಆಯೋಗದ ಅನ್ವಯ ಮಾಡಬೇಕು ಎಂದು ಅವರು ಬೇಡಿಕೆ ಇಟ್ಟಾಗಲೂ ನೋಡೋಣ ಮಾಡೋಣ ಅಂದರು. ಕೆಎಸ್‌ಆರ್‌ಟಿಯನ್ನು ಮುಳುಗುತ್ತಿರುವ ಹಡಗು ಎಂದು ಸಚಿವರು ಹೇಳಿರುವುದು ಸರಿಯಲ್ಲ. ಅದೇಗೆ ಮುಳುಗುತ್ತಿರುವ ಹಡಗು ಆಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ನಾನು ಮತ್ತು ರೇವಣ್ಣ ಇಬ್ಬರೂ ಸಾರಿಗೆ ಸಚಿವರಾಗಿದ್ದೆವು. ನಾನು ನಾಲ್ಕು ವರ್ಷ, ನಾಲ್ಕು ತಿಂಗಳು ಸಾರಿಗೆ ಸಚಿವನಾಗಿದ್ದೆ. ನಾವು ಸಾರಿಗೆ ನೌಕರರ ಜೊತೆ ಮಾತುಕತೆ ‌ನಡೆಸಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆವು. ನಾನು ಸಾರಿಗೆ ಸಚಿವನಾಗಿದ್ದಾಗ ಇಂಕ್ರಿಮೆಂಟ್ ವಿಚಾರವಾಗಿ ಪ್ರತಿಭಟನೆ ನಡೆದಿತ್ತು. ಶೇ 15ರಷ್ಟು ಏರಿಕೆ ಕೇಳಿದಾಗ, ಶೇ 8ರಷ್ಟು ಕೊಡುವುದಾಗಿ ಹೇಳಿದೆವು. ಮಾತುಕತೆ ನಡೆಸಿ‌ ಶೇ 12.5 ಮಾಡಿದ್ದೆವು’ ಎಂದರು.

‘ಖಾಸಗಿವರು ಲಾಭ ಇದ್ದರೆ ಮಾತ್ರ ಬಸ್‌ ಓಡಿಸುತ್ತಾರೆ. ಆದರೆ, ಸಾರಿಗೆ ಇಲಾಖೆ ಹಾಗಲ್ಲ. ಇಲ್ಲಿ ಶೇ 40ರಷ್ಟು ಬಸ್‌ಗಳಿಂದ ನಷ್ಟ ಆಗುತ್ತದೆ. ಆದರೂ ಜನರ ಅನುಕೂಲಕ್ಕಾಗಿ ನಡೆಸಬೇಕಾಗುತ್ತದೆ. ಸಾರಿಗೆ ಇಲಾಖೆಯಲ್ಲಿ ಶೇ 80ರಷ್ಟು ನೋ ಲಾಸ್ ಅಥವಾ ನೋ ಪ್ರಾಫಿಟ್ ಎಂಬ ಹಾಗಿರುತ್ತದೆ. ಕೆಲವೊಮ್ಮೆ ನಷ್ಟದಲ್ಲೇ ನಡೆಯುತ್ತದೆ’ ಎಂದರು.

ರೇವಣ್ಣ ಮಾತನಾಡಿ, ‘ಕಳೆದ ಬಾರಿ ಸಾರಿಗೆ ನೌಕರರು ಮುಷ್ಕರ ನಡೆಸಿದಾಗಲೇ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಹಟಮಾರಿ ಮುಖ್ಯಮಂತ್ರಿ ಹಾಗೂ ಅನನುಭವಿ ಸಚಿವರಿಂದ ಇಂಥ ಸ್ಥಿತಿ ನಿರ್ಮಾಣ ಆಗಿದೆ. ಕೆಎಸ್‌ಆರ್‌ಟಿಸಿ ಇರಬಾರದು ಎನ್ನುವುದು ಬಿಜೆಪಿಯವರ ಒಳಚಿಂತನೆ’ ಎಂದರು.

‘ಎಸ್ಮಾ ಜಾರಿ ಮಾಡುತ್ತೇವೆ, ಪ್ರಮಾಣಪತ್ರ ಕೊಡಿ ಎಂದೆಲ್ಲ ಕೇಳುವ ಬದಲು ಮಾತುಕತೆ ನಡೆಸಲಿ. ಈಶ್ವರಪ್ಪನವರ ಇಲಾಖೆಯ ಹಣ ಹಂಚುವ ಮುಖ್ಯಮಂತ್ರಿಗೆ, ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆ ಬಗೆಹರಿಸಲು ಆಗಲ್ಲವೇ’ ಎಂದು ರೇವಣ್ಣ ಪ್ರಶ್ನಿಸಿದರು.

‘ಎಲ್ಲ ವಿಚಾರದಲ್ಲೂ ಮುಖ್ಯಮಂತ್ರಿ ಗೊಂದಲ ಮೂಡಿಸುತ್ತಿದ್ದಾರೆ. ನಷ್ಟದಲ್ಲಿರುವ ಸಂಸ್ಥೆಯ ನೌಕರರಿಗೆ ಆರನೇ ವೇತನ ಆಯೋಗ ಅನ್ವಯ ಮಾಡಲು ಆಗಲ್ಲ ಅಂತ ಹೇಳಬೇಕಿತ್ತು. ಖಾಸಗಿ ಬಸ್ ಓಡಿಸಿ ಅನ್ನೋದು ಒಂದು ಸರ್ಕಾರ ಹೇಳುವ ಮಾತೇ. ವಿಮೆ ಇಲ್ಲದಿದ್ದರೂ ಓಡಿಸಿ ಅಂತಾರೆ ಅಂದರೆ ಉದ್ದೇಶ ಏನು. ಅಪಘಾತ ಸಂಭವಿಸಿದರೆ ಯಾರು ಹೊಣೆ’’ ಎಂದು ಪ್ರಶ್ನಿಸಿದರು.

‘ಸಾರಿಗೆ ಸಚಿವರಿಗೆ ಇಲಾಖೆ ನಡೆಸುವ ಸಾಮರ್ಥ್ಯ ಇಲ್ಲ. ಹಿಂದಿನ ಸಾರಿಗೆ ಸಚಿವರುಗಳನ್ನು ಕರೆದು ಮಾತನಾಡಲಿ. ಸರ್ವಪಕ್ಷ ಸಭೆ ಕರೆಯಲಿ’ ಎಂದು ಸಲಹೆ ನೀಡಿದರು.

ಸುಧಾಕರ್‌ ಏನೂ ಮಾಡುತ್ತಿಲ್ಲ: ‘ಕೋವಿಡ್ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಸ್ಥಿತಿ ಮಿತಿಮೀರಿದೆ. ತಜ್ಞರ ಸಮಿತಿ ಲಾಕ್‌ಡೌನ್‌ಗೆ ಶಿಫಾರಸು ಮಾಡಿದೆ. ಆದರೆ, ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ. ಸಚಿವರ ನಡುವೆ ಸಮನ್ವಯ ಇಲ್ಲ. ಎರಡೂ ಇಲಾಖೆ ನನಗೇ ಬೇಕು ಎಂದು ತೆಗೆದುಕೊಂಡ ಸಚಿವ ಸುಧಾಕರ್ ಏನೂ ಮಾಡುತ್ತಿಲ್ಲ’ ಎಂದು ಟೀಕಿಸಿದರು.

‘ಕೋವಿಡ್‌ ನಿಭಾಯಿಸಲು ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕೋವಿಡ್‌ನಿಂದ ಭಾನುವಾರ 40 ಜನ ಸಾವಿಗೀಡಾಗಿದ್ದಾರೆ. ಜಾತ್ರೆಯಲ್ಲಿ ಲಕ್ಷ ಲಕ್ಷ ಜನ ಸೇರಲು ಬಿಟ್ಟಿದ್ದಾರೆ. ಕೊಲ್ಕೊತ್ತಾದಲ್ಲಿ ಮೋದಿ ಲಕ್ಷಾಂತರ ಜನ ಸೇರಿಸಿ ಸಭೆ ಮಾಡುತ್ತಾರೆ. ಆಗ ಕೊರೊನಾ ಹರಡುದಿಲ್ಲವೇ’ ಎಂದೂ ಪ್ರಶ್ನಿಸಿದರು.

‘ಅಪಾರ್ಟ್‌ಮೆಂಟ್ ಅಲ್ಲಿ ಇಲ್ಲಿ ಮಾತ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಬಡವರು ಇರುವ ಕಡೆಯೂ ಸರ್ಕಾರ ಜಾಗ್ರತೆ ವಹಿಸಬೇಕು. ನಮ್ಮ ಜನರಿಗೆ ಕೊಡುವುದು ಬಿಟ್ಟು ನಮ್ಮವರು 64 ಲಕ್ಷ ದಶಲಕ್ಷ ಲಸಿಕೆ ರಫ್ತು ಮಾಡಿದ್ದಾರೆ. ಅಮೆರಿಕ ಒಂದೇ ಒಂದು‌ ಲಸಿಕೆ ಹೊರದೇಶಕ್ಕೆ ಕಳುಹಿಸಿಲ್ಲ. ನಾವೇನು ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಗೊತ್ತಿಲ್ಲವೇ. ಆಡಳಿತ ನಡೆವುದು ಗೊತ್ತಿಲ್ಲವೇ’ ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.