
ಮಳವಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುತ್ತೂರು ಮಠದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸ್ಮರಣ ಸಂಚಿಕೆ’ ಬಿಡುಗಡೆ ಮಾಡಿದರು.
–ಪ್ರಜಾವಾಣಿ ಚಿತ್ರ
ಮಳವಳ್ಳಿ (ಮಂಡ್ಯ ಜಿಲ್ಲೆ): ಇಳಿಸಂಜೆಯ ತಂಪು ಗಾಳಿ, ಸಾವಿರಾರು ಮಂದಿಯ ಭಕ್ತಿಯ ಸಿಂಚನದ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1,066ನೇ ಜಯಂತಿ ಮಹೋತ್ಸವಕ್ಕೆ ಇಲ್ಲಿ ಮಂಗಳವಾರ ವಿಧ್ಯುಕ್ತ ಚಾಲನೆ ನೀಡಿದರು.
ಏಷ್ಯಾ ಖಂಡದಲ್ಲೇ ಮೊಟ್ಟಮೊದಲು ಜಲ ವಿದ್ಯುತ್ ಉತ್ಪಾದಿಸಿದ ತಾಲ್ಲೂಕಿನ ಶಿವನಸಮುದ್ರದ ಇತಿಹಾಸವೂ ಕಾರ್ಯಕ್ರಮದ ಶ್ರೀ ಘನಲಿಂಗ ಶಿವಯೋಗಿ ವೇದಿಕೆಯಲ್ಲಿ ಹೊಳೆಯಿತು.
ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ, ಶಾಂತಿಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ಒಂದು ವಾರ ಉತ್ಸವವನ್ನು ಕಳೆಗಟ್ಟಿಸಲು, ವಸ್ತುಪ್ರದರ್ಶನದ ಮಳಿಗೆಗಳು ಸಂಭ್ರಮದಿಂದ ಬಾಗಿಲು ತೆರೆದವು.
ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿ, ಸುತ್ತೂರು ಮಠದ ಸೇವಾ ಕಾರ್ಯಗಳು, ಮಠದ ಸ್ವಾಮೀಜಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ನಾಳಿನ ಭಾರತಕ್ಕಾಗಿ ಯುವಜನರಿಗೆ ಇಂಥ ಮಠಗಳು ಸ್ಫೂರ್ತಿ ತುಂಬಬೇಕು’ ಎಂದು ಕರೆ ನೀಡಿದರು.
‘ಕರ್ನಾಟಕವು ಇಂಥ ಹಲವು ಮಠಗಳ ಸೇವೆಯನ್ನು ಕಂಡಿದೆ. ಕಾಯಕವೇ ಕೈಲಾಸ ಎಂಬುದು ಸಂತರಿಗೆ ಬರಿಯ ಮಾತಾಗದೆ, ಬದುಕಿನ ಭಾಗವೇ ಆಗಿತ್ತು’ ಎಂದು ಅಭಿಪ್ರಾಯಪಟ್ಟರು.
’ಇಂದಿನ ಕ್ಷಿಪ್ರ ಬದಲಾವಣೆ ಮತ್ತು ಅನಿಶ್ಚಿತತೆಯ ಕಾಲದಲ್ಲಿ ನೈತಿಕ ನಾಯಕತ್ವ ಯುವಜನರಲ್ಲಿ ಮೂಡಬೇಕು. 2047ರ ಹೊತ್ತಿಗೆ ಭಾರತದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಒಳಗೊಳ್ಳುವಿಕೆ, ಅಭಿವೃದ್ಧಿ ಮತ್ತು ಮಾನವೀಯತೆ ಒಟ್ಟಿಗೇ ಸಾಗಬೇಕು’ ಎಂದು ಹೇಳಿದರು.
‘ಶಿವಯೋಗಿಗಳ ತ್ಯಾಗ ಮತ್ತು ಆಧ್ಯಾತ್ಮಿಕ ಶಕ್ತಿಗಳು ಬೆಳಕಿನ ದೀವಿಗೆಗಳಂತೆ. 8ನೇ ಶತಮಾನದಲ್ಲಿ ಮಠವನ್ನು ಸ್ಥಾಪಿಸಿದ ಶಿವಯೋಗಿಗಳು ಒಬ್ಬ ಅಖಂಡ ಗುರು. ಅವರ ನಂತರ ಬಂದ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದು ಸ್ಮರಿಸಿದರು.
‘ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಧರ್ಮ, ಶಿಕ್ಷಣ, ಸಂಸ್ಕೃತಿ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಸುತ್ತೂರು ಮಠದ ಜೆಎಸ್ಎಸ್ ಮಹಾವಿದ್ಯಾಪೀಠವು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್, ‘ಸಮಾಜದಲ್ಲಿ ಏಕತೆ, ಸಮತೆ ಮತ್ತು ಸದ್ಭಾವಗಳನ್ನು ತರುವಲ್ಲಿ ಮಠವು ಗಣನೀಯ ಕಾರ್ಯ ಮಾಡಿದೆ’ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ತಂದೆ ಎಚ್.ಡಿ. ದೇವೇಗೌಡರು ರಾಜಕೀಯ ಪ್ರವೇಶಿಸಿದ 60ರ ದಶಕದಿಂದಲೂ ಮಠದೊಂದಿಗೆ ನಮ್ಮ ಕುಟುಂಬ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ನೆನೆದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಕನಕಪುರ ಶ್ರೀದೇಗುಲ ಮಠದ ಚನ್ನಬಸವ ಸ್ವಾಮಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.