ADVERTISEMENT

‘ಮೋದಿ ವಿರುದ್ಧ ಆಯೋಗ ಕ್ರಮ ತೆಗೆದುಕೊಳ್ಳಬೇಕು’

ಮಾಧ್ಯಮ ಸಂವಾದದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 18:59 IST
Last Updated 8 ಏಪ್ರಿಲ್ 2019, 18:59 IST
   

ಬೆಂಗಳೂರು: ‘ಸೇನೆಯ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಗಂಭೀರ ಅಪರಾಧ ಎಸಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸುವಂಥ ಕಠಿಣ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಕೊಳ್ಳಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಆಗ್ರಹಿಸಿದರು.

ಮಾಧ್ಯಮ ಸಂವಾದದಲ್ಲಿ ಸೋಮವಾರ ಮಾತನಾಡಿದ ಅವರು, ‘ದೇಶದ ರಕ್ಷಣಾ ವಿಷಯಗಳನ್ನು ಮೋದಿ ಚುನಾವಣಾ ಪ್ರಚಾರ ವಿಷಯಗಳನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

‘ಚುನಾವಣೆ ಘೋಷಣೆಯ ಬಳಿಕಿ ಸಂವಿಧಾನಾತ್ಮಕ ಹುದ್ದೆ ಹೊಂದಿದವರು ಹಾಗೂ ರಾಜ್ಯಪಾಲರಾದ ಕಲ್ಯಾಣ್ ಸಿಂಗ್ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು, ಮೋದಿಗೆ ಮತ ಹಾಕಿ ಮತ್ತೆ ಪ್ರಧಾನಿ ಮಾಡಿ ಎಂಬ ಹೇಳಿಕೆ ನೀಡುತ್ತಾರೆ. ಅದರ ವರದಿ ಆಧರಿಸಿ ನೀಡಿದ ದೂರನ್ನು ಆಯೋಗ ರಾಷ್ಟ್ರಪತಿಗೆ ನೀಡುತ್ತದೆ. ರಾಷ್ಟ್ರಪತಿ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಗೃಹ ಸಚಿವರಿಗೆ ಕಡತ ರವಾನಿಸುತ್ತಾರೆ. ರಾಷ್ಟ್ರಪತಿಈ ರೀತಿ ಮಾಡುವ ಬದಲು ಕಲ್ಯಾಣ್‌ ಸಿಂಗ್‍ ಅವರನ್ನು ಅಮಾನತು ಮಾಡಿ ದೇಶದಲ್ಲಿ ಆರೋಗ್ಯಕರ ಚುನಾವಣೆ ನಡೆಯುತ್ತಿದೆ ಎಂಬ ಸಂದೇಶ ರವಾನಿಸಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿದ ಎಚ್.ಕೆ. ಪಾಟೀಲ, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇನೆಯನ್ನು ಮೋದಿ ಸೇನೆ ಎಂದು ಕರೆಯುತ್ತಾರೆ. ಇದನ್ನು ದೇಶದ್ರೋಹಿ ಮಾಡಬಹುದೇ ಹೊರತು ದೇಶಪ್ರೇಮಿ ಮಾಡಲು ಸಾಧ್ಯವಿಲ್ಲ. ಆಯೋಗ ಇದನ್ನು ಗಮನಿಸಿದೆಯಾದರೂ ಕ್ರಮ ಕೈಗೊಳ್ಳಲಿಲ್ಲ’ ಎಂದರು.

ಮಹತ್ವದ ಜವಾಬ್ದಾರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಪಾಟೀಲ, ‘ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಮಹತ್ವದ ಜವಾಬ್ದಾರಿ. ಎಲ್ಲರಿಗೂ ಪಕ್ಷದ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ ಕೊಡಲು ಸಾಧ್ಯ ಇಲ್ಲ’ ಎಂದರು.

‘ಮಂಡ್ಯ, ಮೈಸೂರಿನಲ್ಲಿ ಮೈತ್ರಿಯಲ್ಲಿರುವ ಗೊಂದಲಗಳನ್ನು ಸಿದ್ದರಾಮಯ್ಯ ಬಗೆಹರಿಸಿದ್ದಾರೆ’ ಎಂದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಬಿಜೆಪಿ ಕುತಂತ್ರ ಫಲಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.