ಬೆಂಗಳೂರು: ವಿಧಾನಸಭಾ ಚುನಾವಣೆ ಅವಧಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಕಚೇರಿಯು ನಡೆಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ ಕಲಬುರಗಿ ಬ್ಯೂರೊ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರಿಗೆ ಪ್ರಥಮ ಹಾಗೂ ಮಂಗಳೂರಿನ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬ್ಯೂರೊಗಳ ಛಾಯಾಗ್ರಾಹಕ ಫಕ್ರುದ್ದೀನ್ ಎಚ್. ಅವರಿಗೆ ತೃತೀಯ ಬಹುಮಾನ ಲಭಿಸಿವೆ.
ಬಾಗಲಕೋಟೆಯ ಹಳ್ಳಿ ಸಂದೇಶ ಸುದ್ದಿ ಪತ್ರಿಕೆ ಛಾಯಾಗ್ರಾಹಕ ಇಂದ್ರಕುಮಾರ್ ದಸ್ತೇನವರ್ ಅವರಿಗೆ ದ್ವಿತೀಯ ಬಹುಮಾನ ದೊರಕಿದೆ. ಹವ್ಯಾಸಿ ಛಾಯಾಗ್ರಾಹಕ ಕೆ. ವೆಂಕಟೇಶ್ ಅವರನ್ನು ವಿಶೇಷ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಕನ್ನಡಪ್ರಭದ ಬೆಂಗಳೂರಿನ ಹಿರಿಯ ಛಾಯಾಗ್ರಾಹಕ ಸುರೇಶ್ ಪಿ. ಮತ್ತು ಎಕನಾಮಿಕ್ ಟೈಮ್ಸ್ ಛಾಯಾಗ್ರಾಹಕ ಎನ್. ನರಸಿಂಹಮೂರ್ತಿ ಅವರಿಗೆ ಸಮಾಧಾನಕರ ಬಹುಮಾನಗಳು ಲಭಿಸಿವೆ.
ಮೇ 10ರಂದು ನಡೆದ ಮತದಾನದ ಸಂದರ್ಭದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. 63 ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆಯ್ಕೆ ಸಮಿತಿಯು ಎಲ್ಲ ಛಾಯಾಚಿತ್ರಗಳನ್ನು ಪರಿಶೀಲಿಸಿ, ಅತ್ಯುತ್ತಮ ಚಿತ್ರಗಳನ್ನು ಬಹುಮಾನಕ್ಕೆ ಆಯ್ಕೆಮಾಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಪ್ರಥಮ ಬಹುಮಾನಕ್ಕೆ ₹ 25,000, ದ್ವಿತೀಯ ಬಹುಮಾನಕ್ಕೆ ₹ 15,000, ತೃತೀಯ ಬಹುಮಾನಕ್ಕೆ ₹ 10,000, ವಿಶೇಷ ಬಹುಮಾನಕ್ಕೆ ₹ 5,000 ಮತ್ತು ಸಮಾಧಾನಕರ ಬಹುಮಾನಗಳಿಗೆ ತಲಾ ₹ 3,000 ನಗದು ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.