ಬೆಂಗಳೂರು:ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಇಂದು 1912 ಸಹಾಯವಾಣಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾನವಮಿ ಹಬ್ಬದ ರಜಾ ದಿನದಂದು ಕೂಡ ಇಲಾಖಾ ಕಾರ್ಯಕ್ಷಮತೆ ಪರಿಶೀಲಿಸಲು ಸಹಾಯವಾಣಿಗೆ ಭೇಟಿ ನೀಡಿ ಬರುವ ಕರೆಗಳ ವಿವರ ಪಡೆದು, ಖುದ್ದು ಗ್ರಾಹಕರ ಕರೆಗಳನ್ನು ಸ್ವೀಕರಿಸಿ ದೂರುಗಳನ್ನು ಆಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಹಾಯವಾಣಿಯ ಕಾರ್ಯ ಹೇಗೆ ನಡೆಯುತ್ತಿದೆ ಎಂದು ಸ್ವತಃ ಪರಿಶೀಲಿಸಲು ಸಚಿವರು ತೆರಳಿದ್ದರು. ಸಚಿವರ ದಿಢೀರ್ ಭೇಟಿಗೆ ಸಹಾಯವಾಣಿಯ ಸಿಬ್ಬಂದಿ ಕೊಂಚ ಗಲಿಬಿಲಿಗೊಂಡರು. ಪರಿಶೀಲನೆ ವೇಳೆ ಗ್ರಾಹಕರ ಕರೆಗಳನ್ನು ತಾವೇ ಸ್ವೀಕರಿಸಿ ಅವರ ದೂರುಗಳನ್ನ ಆಲಿಸಿಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಶೀಘ್ರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು. ಅಲ್ಲದೇ ಪ್ರತಿನಿತ್ಯ 1912 ಸಹಾಯವಾಣಿಗೆ ಎಷ್ಟು ಕರೆಗಳು ಬರುತ್ತಿವೆಹಾಗೂ ದೂರುಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ಕರೆಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ಸಹಾಯವಾಣಿಗೆ ಬರುತ್ತಿದ್ದು, ಇನ್ನಷ್ಟು ಶೀಘ್ರದಲ್ಲಿ ದೂರುಗಳ ವಿಲೇವಾರಿ ಆಗಬೇಕೆಂದು ಸೂಚಿಸಿದರು.
ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಈ ಪ್ರಕ್ರಿಯೆ ಇನ್ನಷ್ಟು ಸುಲಲಿತ ಹಾಗೂ ಹೆಚ್ಚು ಜನಸ್ನೇಹಿ ಮಾಡುವ ಬಗ್ಗೆ ಸಭೆಮಾಡಲಾಗುವುದು ಎಂದರು. ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಇದನ್ನು ಇನ್ಮಷ್ಟು ಚುರುಕುಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.