ADVERTISEMENT

ಮೈಲಿಗೆಯಾಗಿ ಇಂಗ್ಲಿಷ್ ನೋಡದಿರಿ: ಎಚ್‌. ವಿಶ್ವನಾಥ್‌

’ಚುನಾವಣೆಯಲ್ಲಿ ಬೂತ್‌ಗೆ ₹1 ಲಕ್ಷ ಕೊಡಬೇಕಿದೆ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 17:48 IST
Last Updated 24 ಡಿಸೆಂಬರ್ 2018, 17:48 IST

ಪಿರಿಯಾಪಟ್ಟಣ: ‘ಇಂಗ್ಲಿಷನ್ನು ಮೈಲಿಗೆ ಆಗಿ ನೋಡಬೇಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್
ಸೋಮವಾರ ಮನವಿ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕದ ದಶಕಗಳ ರಾಜಕಾರಣ ಮತ್ತು ಪ್ರಸ್ತುತತೆ’ ಕುರಿತು ಮಾತನಾಡಿದರು.

‘ರಾಜಕಾರಣಿಗಳು, ಹೋರಾಟಗಾರರು, ಸಾಹಿತಿಗಳು, ಮಾಧ್ಯಮದವರು ಹೀಗೆ ಸಮಾಜದ ಎಲ್ಲರ ಮಕ್ಕಳೂ ಇಂಗ್ಲಿಷ್ ಭಾಷೆಯ ಶಾಲೆ
ಗಳಲ್ಲೇ ಕಲಿಯುತ್ತಿದ್ದಾರೆ. ಆದರೆ, ಹೊರಗೆ ಇಂಗ್ಲಿಷನ್ನು ವಿರೋಧಿಸು ವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಇಂಗ್ಲಿಷ್ ಪ್ರಸ್ತುತ ದೈನಂದಿನ ವ್ಯವಹಾರವಾಗಿದೆ. ಮುಂದಿನ ತಲೆಮಾರಿಗೆ ಈ ಭಾಷೆ ಅತ್ಯಗತ್ಯವಾಗಿ ಬೇಕಿದೆ. ಸುಮ್ಮನೇ ವಿರೋಧಿಸು
ವುದು ಸರಿಯಲ್ಲ. ಮಕ್ಕಳಿಗೆ ಆ ಭಾಷೆ ಕಲಿಯಬೇಡಿ, ಈ ಭಾಷೆ ಮಾತ್ರ ಕಲಿಯಿರಿ ಎಂದು ತಾಕೀತು ಮಾಡುವುದೂ ತಪ್ಪು’ ಎಂದರು.‌

‘ಇಂದು ಮೌಲ್ಯಾಧಾರಿತ ರಾಜಕಾರಣ ಹುಡುಕುವುದಕ್ಕೂ ಆಗದ ಸ್ಥಿತಿ ಇದೆ. ಹಿಂದೆ ಮತಕ್ಕಾಗಿ ಹಣಕೊಟ್ಟರೆ ಜನರು ಬೈಯ್ಯುತ್ತಿದ್ದರು. ಈಗ ಒಂದು ಬೂತ್‌ಗೆ ಕನಿಷ್ಠ ₹ 1 ಲಕ್ಷ ಕೊಡಲೇಬೇಕಾದ ಸ್ಥಿತಿಯಲ್ಲಿದ್ದೇವೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಈಗ ಶಾಸಕರು, ಸಂಸದರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡಕ್ಕೆ ಚರಮಗೀತೆ: ಬಂಜಗೆರೆ ಜಯಪ್ರಕಾಶ್

ಸೌಲಭ್ಯಗಳನ್ನು ಕೊಡದೇ ಸರ್ಕಾರಗಳೇ ಸರ್ಕಾರಿ ಶಾಲೆಗಳನ್ನು ಕೊಲ್ಲುತ್ತಿವೆ. ಈ ಮೂಲಕ ಕನ್ನಡ ಭಾಷೆಗೆ ಚರಮಗೀತೆಯನ್ನು ಹಾಡುತ್ತಿವೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಕಿಡಿಕಾರಿದರು.

‘ಸರ್ಕಾರಗಳಿಗೆ ಕನ್ನಡ ಉಳಿಸಬೇಕು ಎಂಬ ಉದ್ದೇಶ ಇದ್ದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರಲಿಲ್ಲ. ಸದ್ಯ ಕನ್ನಡವೂ ಸರಿಯಾಗಿ ಬಾರದ, ಇಂಗ್ಲಿಷೂ ಸ್ಪಷ್ಟವಾಗಿ ಬಾರದ ತಲೆಮಾರನ್ನು ಹುಟ್ಟು ಹಾಕುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.