ಬೆಂಗಳೂರು: ಸರ್ಕಾರಿ ಕಲಾ ಕಾಲೇಜು ಹಾಗೂ ಸಂವಿಧಾನ ಓದು ಅಭಿಯಾನ– ಕರ್ನಾಟಕದ ವತಿಯಿಂದ ಸಂವಿಧಾನದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಎರಡನೇ ಬಾರಿಗೆ ಆಯೋಜಿಸಲಾಗಿದೆ.
ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಬೆಂಗಳೂರಿನಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಕ್ಟೋಬರ್ 25ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಸಿ. ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು-ಕರ್ತವ್ಯಗಳು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಹಿಳೆ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ವಿಷಯಗಳಿವೆ. ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು ಕನ್ನಡ ಅಥವಾ ಇಂಗ್ಲಿಷ್ನಲ್ಲಿ ಬರೆಯಬಹುದು ಎಂದಿದ್ದಾರೆ.
ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹10 ಸಾವಿರ, ತೃತೀಯ ಬಹುಮಾನ ₹5 ಸಾವಿರವಿದ್ದು, 50 ಸಮಾಧಾನಕರ ಬಹುಮಾನವಾಗಿ ತಲಾ ₹1 ಸಾವಿರ ನೀಡಲಾಗುತ್ತದೆ. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಂವಿಧಾನ ಓದು ಅಭಿಯಾನ– ಕರ್ನಾಟಕದ ಸಂಚಾಲಕ ಬಿ. ರಾಜಶೇಖರ ಮೂರ್ತಿ ತಿಳಿಸಿದ್ದಾರೆ.
ಒಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕಾಲೇಜಿನ ಪ್ರಾಂಶುಪಾಲರಿಂದ ಪಡೆದ ದೃಢೀಕರಣ ಪತ್ರವನ್ನು ಅ.20ರೊಳಗೆ ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು- 560 001 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಪ್ರಬಂಧ ಸ್ಪರ್ಧೆಯ ದಿನ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಭಾಗವಹಿಸಬಹುದು ಎಂದಿದ್ದಾರೆ.
ವಿವರಗಳಿಗೆ ಸಂಪರ್ಕಿಸಿ: 74839 50580
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.