ADVERTISEMENT

ಮಂಡ್ಯ: 7 ಗಂಟೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಮಾಡಿ ಪ್ರತಿಭಟನೆ

4 ಜಿಲ್ಲೆಗಳ ರೈತರು ಭಾಗಿ, ವಾಹನ ಸಂಚಾರ ಸಂಪೂರ್ಣ ಸ್ಥಗಿತ, ಬದಲಿ ಮಾರ್ಗದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 12:35 IST
Last Updated 26 ನವೆಂಬರ್ 2021, 12:35 IST
ದೆಹಲಿಯ ರೈತ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ  ರೈತ, ಪ್ರಗತಿಪರ ಸಂಘಟನೆಗಳ ಸದಸ್ಯರು ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ದೆಹಲಿಯ ರೈತ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ  ರೈತ, ಪ್ರಗತಿಪರ ಸಂಘಟನೆಗಳ ಸದಸ್ಯರು ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ಮಂಡ್ಯ: ದೆಹಲಿಯ ರೈತ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ಭಾಗದ ನಾಲ್ಕು ಜಿಲ್ಲೆಗಳ ರೈತ, ಪ್ರಗತಿಪರ ಸಂಘಟನೆಗಳ ಸದಸ್ಯರು ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿ ಶುಕ್ರವಾರ 7 ಗಂಟೆಗಳ ಕಾಲ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 4 ಗಂಟೆಯವರೆಗೂ ನಡೆಯಿತು. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೆದ್ದಾರಿಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌ ನಿಲ್ಲಿಸಿ, ಜಾನುವಾರುಗಳನ್ನು ಕಟ್ಟಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ರಸ್ತೆಯಲ್ಲೇ ಊಟ, ತಿಂಡಿ ಸೇವಿಸಿದರು.

ಪ್ರತಿಭಟನೆ ಆರಂಭವಾದಾಗ ಎರಡು ಬೆಂಗಳೂರು– ಮೈಸೂರು ಎರಡೂ ಕಡೆ 1 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆ 4ರವರೆಗೂ ಪ್ರತಿಭಟನೆ ನಡೆಸುವುದಾಗಿ ಮುಖಂಡರು ಮೊದಲೇ ತಿಳಿಸಿದ್ದ ಕಾರಣ ಪೊಲೀಸರು ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಿದರು.

ADVERTISEMENT

ಮೈಸೂರು ಕಡೆಯಿಂದ ಬರುವ ವಾಹನಗಳು ಕೆಆರ್‌ಎಸ್‌, ಕಟ್ಟೇರಿ, ಎಲೆಕೆರೆ ಹ್ಯಾಂಡ್‌ಪೋಸ್ಟ್‌, ಪಾಂಡವಪುರ, ಮಂಡ್ಯ ಮೂಲಕ ಬೆಂಗಳೂರು ಕಡೆ ತೆರಳಿದವು. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಮದ್ದೂರು, ಭಾರತೀನಗರ, ಮಳವಳ್ಳಿ, ಬನ್ನೂರು ಮಾರ್ಗದಲ್ಲಿ ಮೈಸೂರು ತಲುಪಿದವು.

‘ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಜಗತ್ತಿನ ಅತೀದೊಡ್ಡ ಆಂದೋಲನವಾಗಿದ್ದು ನ.26ಕ್ಕೆ ವರ್ಷ ಪೂರೈಸಿದೆ. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಆದರೆ ರೈತ ಹೋರಾಟದಲ್ಲಿ 700 ಜನರು ಮೃತಪಟ್ಟಿದ್ದು ಅವರಿಗೆ ಪರಿಹಾರ ದೊರೆಯಬೇಕು. ಅಲ್ಲಿಯವರೆಗೂ ದೆಹಲಿಯಲ್ಲಿ ಹೋರಾಟ ಮುಂದುವರಿಯಲಿದೆ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಾವು ಸಾಂಕೇತಿಕವಾಗಿ ಒಂದು ದಿನ ಹೋರಾಟ ನಡೆಸಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹೋರಾಟದಲ್ಲಿ ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕೃಷ ಕೂಲಿ ಕಾರ್ಮಿಕರ ಸಂಘ, ಜನಶಕ್ತಿ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಿಐಟಿಯು ಮುಂತಾದ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.