ADVERTISEMENT

ರೈತರ ಚಳುವಳಿಯು ಭಾರತ್‌ ಜೋಡೊ ಯಾತ್ರೆಗೆ ದೊಡ್ಡ ಸ್ಫೂರ್ತಿ: ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 12:37 IST
Last Updated 4 ಅಕ್ಟೋಬರ್ 2022, 12:37 IST
ಭಾರತ್‌ ಜೋಡೊ ಪಾದಯಾತ್ರೆ ಸಂದರ್ಭ ಮಂಡ್ಯದಲ್ಲಿ ಬೆಂಬಲಿಗರ ಜೊತೆ ಹೆಜ್ಜೆ ಹಾಕಿದ ರಾಹುಲ್‌ ಗಾಂಧಿ | ಪಿಟಿಐ ಚಿತ್ರ
ಭಾರತ್‌ ಜೋಡೊ ಪಾದಯಾತ್ರೆ ಸಂದರ್ಭ ಮಂಡ್ಯದಲ್ಲಿ ಬೆಂಬಲಿಗರ ಜೊತೆ ಹೆಜ್ಜೆ ಹಾಕಿದ ರಾಹುಲ್‌ ಗಾಂಧಿ | ಪಿಟಿಐ ಚಿತ್ರ   

ಬೆಂಗಳೂರು: ಭಾರತ್‌ ಜೋಡೊ ಯಾತ್ರೆ ಮಾಡಲು ನಿರ್ಧರಿಸಿದಾಗ, ರೈತರ ಚಳುವಳಿ ನಮಗೆ ದೊಡ್ಡ ಸ್ಫೂರ್ತಿಯಾಗಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಆಯುಧಪೂಜೆ ಮತ್ತು ವಿಜಯದಶಮಿ ಅಂಗವಾಗಿ ಭಾರತ್‌ ಜೋಡೊ ಪಾದಯಾತ್ರೆಗೆ 2 ದಿನ ಬಿಡುವು ನೀಡಲಾಗಿದ್ದು, ಅ.6ರಂದು ಮಂಡ್ಯದ ಪಾಂಡವಪುರದಿಂದ ಪಾದಯಾತ್ರೆ ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಪಾದಯಾತ್ರೆ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಹುತಾತ್ಮರಾದ ರೈತರಿಗೆ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಕಾರಣ ಒಂದೇ - ಬಿಜೆಪಿ ಯಾವಾಗಲೂ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ADVERTISEMENT

ಕಳೆದ ವರ್ಷದ ಅ. 3ರಂದು ಉತ್ತರ ಪ್ರದೇಶದ ಲಖೀಂಪುರ ಖೀರಿ ಜಿಲ್ಲೆಯ ಟಿಕುನಿಯಾ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಉತ್ತರ ಪ್ರದೇಶದ ಆಗಿನ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಭೇಟಿಯನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಕಾರು ಚಲಾಯಿಸಿದ್ದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಪತ್ರಕರ್ತ ಸೇರಿ ನಾಲ್ವರು ಅಸುನೀಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.