ಬೆಂಗಳೂರು: ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಖೋಟಾನೋಟು ಚಲಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಸ್.ಕೆ. ತಾಜಾಮುಲ್ (28) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಈಚೆಗೆ ಬಿಹಾರದ ಚಂಪಾರಣ್ ಜಿಲ್ಲೆಯ ಸೊಗೌಲಿಯಲ್ಲಿ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮಾಲ್ಡಾ ಜಿಲ್ಲೆ ವೈಷ್ಣವನಗರದ ಮೋಹನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಆರೋಪಿಯನ್ನು ಬಿಹಾರದ ಮೋತಿಹಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ವಿಜಯವಾಡ ಎನ್ಐಎ ವಿಶೇಷ ಕೋರ್ಟ್ನಲ್ಲಿ ಹಾಜರುಪಡಿಸಲು ಐದು ದಿನಗಳ ‘ಟ್ರಾನ್ಸಿಟ್ ರಿಮ್ಯಾಂಡ್’ ಪಡೆಯಲಾಗಿದೆ.
2018ರ ಮಾರ್ಚ್ 31ರಂದುವಿಶಾಖಪಟ್ಟಣದಲ್ಲಿ ರೆವಿನ್ಯೂ ಗುಪ್ತಚರ ನಿರ್ದೇಶಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದ ₹ 10.20 ಲಕ್ಷ ಖೋಟಾಮೋಟು ಪ್ರಕರಣದಲ್ಲಿಮೊಹಮದ್ ಮೆಹಬೂಬ್ ಬೇಗ್ ಅಲಿಯಾಸ್ ಅಜರ್ ಬೇಗ್ ಹಾಗೂ ಸಯ್ಯದ್ ಇಮ್ರಾನ್ ಎಂಬುವರನ್ನು ಬಂಧಿಸಿದ್ದರು. ಅವರು ಕೊಟ್ಟ ಸುಳಿವಿನ ಮೇಲೆ ಈಗ ತಾಜಾಮುಲ್ನನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಮಹಮದ್ ಮೆಹಬೂಬ್ ಬೇಗ್ ಹಾಗೂ ಸಯ್ಯದ್ ಇಮ್ರಾನ್ ವಿಚಾರಣೆ ವೇಳೆ, ತಾವು ಬೆಂಗಳೂರಿನಿಂದ ಮಾಲ್ಡಾಗೆ ಹೋಗಿ ತಾಜಾಮುಲ್ ಸಹಚರ ಸದ್ದಾಂ ಅಲಿಯಾಸ್ ಫೈರೋಜ್ ಶೇಖ್ ಎಂಬಾತನಿಂದ ಖೋಟಾನೋಟು ಪಡೆಯುತ್ತಿದ್ದುದ್ದಾಗಿ ಹೇಳಿದ್ದರು.
ಗಡಿಯಾಚೆಯ ತಮ್ಮ ಸಹಚರರಿಂದ ತಾಜಾಮುಲ್ ಖೋಟುನೋಟು ತರಿಸಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಲಾವಣೆ ಮಾಡಲು ಹಂಚಿಕೆ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಎನ್ಐಎ ಹೈದರಾಬಾದ್ ಅಧಿಕಾರಿಗಳು ಮೊಹಮದ್ ಮೆಹಬೂಬ್ ಬೇಗ್ ಮತ್ತು ಸಯ್ಯದ್ ಇಮ್ರಾನ್ ವಿರುದ್ಧ 2018ರ ಜೂನ್ 29ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.