ADVERTISEMENT

ಪರಿಹಾರಕ್ಕೆ ತೆರಳಿದ್ದ ಮೂವರು ಸಾವು

ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಿಸಲು ಬಂದಿದ್ದ ರವಿಕುಮಾರ್ ತಂಡ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:48 IST
Last Updated 11 ಆಗಸ್ಟ್ 2019, 19:48 IST
   

ಯಲ್ಲಾಪುರ (ಉತ್ತರ ಕನ್ನಡ): ತಾಲ್ಲೂಕಿನ ಬಾಳೇಹದ್ದ ಕ್ರಾಸ್ ಬಳಿ ಕಾರು ಹಾಗೂ ಪಿಕಪ್ ವಾಹನದ ನಡುವೆ ಭಾನುವಾರ ಸಂಭವಿಸಿದ ಅಪಘಾತದಲ್ಲಿ, ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಿಸಲು ಬಂದಿದ್ದ ಮೈಸೂರಿನ ರವಿಕುಮಾರ್ ಟಿ (44) ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿರಸಿ ತಾಲ್ಲೂಕು ಭೈರುಂಬೆ ಸೂರಿಮನೆಯ ಮಹಾಬಲೇಶ್ವರ ಹೆಗಡೆ (63) ಮತ್ತು ಶಾರದಾ ಹೆಗಡೆ (55) ದಂಪತಿ ಮೃತಪಟ್ಟ ಇನ್ನಿಬ್ಬರು ವ್ಯಕ್ತಿಗಳು. ರವಿಕುಮಾರ್ ಜೊತೆ ಬಂದಿದ್ದ ಮೈಸೂರು ಲಕ್ಷ್ಮೀಪುರದ ಮಹಾದೇವ ಹನುಮೇಗೌಡ ಮತ್ತು ಶೇಖರ್ ಎನ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದಿತ್ತು.

ತುಮಕೂರು ಜಿಲ್ಲೆ ಪಾವಗಡದ ರವಿಕುಮಾರ್ ಅವರು ಮೈಸೂರಿನ ಎಂಐಟಿಯಲ್ಲಿ ಉದ್ಯೋಗಿಯಾಗಿದ್ದರು. ಎಬಿವಿಪಿ ಕಾರ್ಯಕರ್ತರಾಗಿದ್ದ ಅವರು, ಮೈಸೂರಿನಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ, ಶನಿವಾರ ರಾತ್ರಿ ಅಲ್ಲಿಂದ ಹೊರಟು, ತಾಲ್ಲೂಕಿನ ಕಿರವತ್ತಿಯಲ್ಲಿರುವ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಅವನ್ನು ವಿತರಿಸಿ ವಾಪಸ್ಸಾಗುತ್ತಿರುವಾಗ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಅವರೇ ಕಾರು ಚಾಲನೆ ಮಾಡುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.