ADVERTISEMENT

ನೆರೆ ಸಂಕಷ್ಟ: ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ

ಚಾಲುಕ್ಯರ ಸ್ಮಾರಕ ವೀಕ್ಷಣೆ: ಆದಾಯ ಅರ್ಧದಷ್ಟು ಕುಸಿತ

ಎಸ್.ಎಂ.ಹಿರೇಮಠ
Published 3 ಜನವರಿ 2020, 21:44 IST
Last Updated 3 ಜನವರಿ 2020, 21:44 IST
ಪ್ರವಾಸಿಗರಿಂದ ಬಾದಾಮಿಯ ವಿಶ್ವಪ್ರಸಿದ್ಧ ಗುಹಾಂತರ ದೇವಾಲಯಗಳ ವೀಕ್ಷಣೆ
ಪ್ರವಾಸಿಗರಿಂದ ಬಾದಾಮಿಯ ವಿಶ್ವಪ್ರಸಿದ್ಧ ಗುಹಾಂತರ ದೇವಾಲಯಗಳ ವೀಕ್ಷಣೆ   

ಬಾದಾಮಿ: ಮಲಪ್ರಭಾ ನದಿಯಲ್ಲಿ ನೆರೆ ಸಂಕಷ್ಟದ ಕಾರಣ ಚಾಲುಕ್ಯರ ಸ್ಮಾರಕಗಳಾದ ಇತಿಹಾಸ ಪ್ರಸಿದ್ಧ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಈ ಹಂಗಾಮಿನಲ್ಲಿ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿದೆ.

ಇಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದ ಜನವರಿವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. 2018ರಲ್ಲಿ ಸುಮಾರು ಎರಡೂವರೆ ಲಕ್ಷದಷ್ಟು ಜನ ಪ್ರವಾಸಿಗರು ಭೇಟಿ ನೀಡಿದ್ದರು. 2019ರ ಸಾಲಿನಲ್ಲಿ ಒಂದೂವರೆ ಲಕ್ಷಕ್ಕೆ ಇಳಿಮುಖವಾಗಿದೆ.

ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯ ಕುಸಿತ ಕಂಡಿದೆಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಮೌನೇಶ ಕುರವತ್ತಿ ಮಾಹಿತಿ ನೀಡಿದರು.

ADVERTISEMENT

ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಲಪ್ರಭಾ ನದಿಯಲ್ಲಿ ನೆರೆಯಿಂದಾಗಿ ಪ್ರವಾಸಿ ಸ್ಮಾರಕಗಳಿಗೆ ನೀರು ನುಗ್ಗಿ ಅಸ್ತವ್ಯಸ್ತವಾಗಿತ್ತು. ಪಟ್ಟದಕಲ್ಲು ಮತ್ತು ಐಹೊಳೆ ದೇವಾಲಯಗಳು ಸಂಪೂರ್ಣ ಜಲಾವೃತವಾಗಿದ್ದವು. ಸ್ಮಾರಕಗಳನ್ನು ಸಂಪರ್ಕಿಸುವ ರಸ್ತೆಗಳೂ ಕೊಚ್ಚಿಹೋಗಿದ್ದವು. ಬಾದಾಮಿ–ಪಟ್ಟದಕಲ್ಲು–ಐಹೊಳೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಟ್ಟದಕಲ್ಲು ಬಳಿ ಪ್ರವಾಹದ ಸೆಳೆತದಲ್ಲಿ ಕೊಚ್ಚಿ ಹೋಗಿದ್ದು, ಇನ್ನೂ ದುರಸ್ತಿಯಾಗಿಲ್ಲ. ಪ್ರವಾಸಿಗರು ಪರ್ಯಾಯ ರಸ್ತೆ ಬಳಸುತ್ತಿದ್ದಾರೆ.ಮಹಾಕೂಟ, ನಾಗನಾಥನಕೊಳ್ಳ ಮತ್ತು ಹುಲಿಗೆಮ್ಮನಕೊಳ್ಳದಲ್ಲೂ ಈ ವರ್ಷ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

*
ಕುಡಿಯುವ ನೀರು, ಊಟ ಹಾಗೂ ಶೌಚಾಲಯಗಳಿಗೆ ಸೂಕ್ತವಾದ ವ್ಯವಸ್ಥೆ ಇಲ್ಲ. ಮೂಲಸೌಕರ್ಯ ಒದಗಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ.
–ರಾಘವೇಂದ್ರ ಶಿರಸಿ, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.