ADVERTISEMENT

ಹಾರುಬೂದಿ ವಹಿವಾಟು ಅಬಾಧಿತ

ಸಿಮೆಂಟ್‌ ಇಟ್ಟಿಗೆ ತಯಾರಿಸಲು ಬಳಕೆ; ವಿವಿಧ ಕಂಪನಿಗಳಿಂದ ಖರೀದಿ

ನಾಗರಾಜ ಚಿನಗುಂಡಿ
Published 3 ಸೆಪ್ಟೆಂಬರ್ 2019, 8:52 IST
Last Updated 3 ಸೆಪ್ಟೆಂಬರ್ 2019, 8:52 IST
ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ ರೈಲಿನ ಸರಕು ಸಾಗಣೆ ಬೋಗಿಗಳಿಗೆ ಹಾರುಬೂದಿ ತುಂಬಿಸುವ ನೋಟ
ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ ರೈಲಿನ ಸರಕು ಸಾಗಣೆ ಬೋಗಿಗಳಿಗೆ ಹಾರುಬೂದಿ ತುಂಬಿಸುವ ನೋಟ   

ರಾಯಚೂರು: ಬೇಡಿಕೆ ಕಡಿಮೆಯಾಗಿ ಸಿಮೆಂಟ್‌ ಕಾರ್ಖಾನೆಗಳು ಉತ್ಪಾದನೆ ತಗ್ಗಿಸಿದ್ದರೂ ಇದಕ್ಕೆ ಬಳಸುವ ಹಾರು ಬೂದಿ ಖರೀದಿಸುವ ಪ್ರಮಾಣದಲ್ಲಿ ಯಾವ ಬದಲಾವಣೆಯಾಗಿಲ್ಲ.

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದಿಂದ ಪ್ರತಿವರ್ಷ 10.87 ಲಕ್ಷ ಮೆಟ್ರಿಕ್‌ ಟನ್‌ ಹಾರುಬೂದಿ ಸಿಮೆಂಟ್‌ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿದೆ.

ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸಿದ ನಂತರ ಉಳಿಯುವ ಹಾರು ಬೂದಿಯನ್ನು ಸಿಮೆಂಟ್‌ ಇಟ್ಟಿಗೆ ತಯಾರಿಕೆಯಲ್ಲಿ ಮಿಶ್ರಣವಾಗಿ ಬಳಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಹಿಂದೆ ಪರಿಸರಕ್ಕೆ ಸಮಸ್ಯೆಯಾಗಿದ್ದ ಇದು, ಈಗ ಆದಾಯದ ಮೂಲ.

ADVERTISEMENT

ಸಿಮೆಂಟ್‌ ಇಟ್ಟಿಗೆ ತಯಾರಿಸಲು ಇದನ್ನು ಬಳಸಲಾಗುತ್ತಿದೆ. ಸಿಮೆಂಟ್‌ ಕಾರ್ಖಾನೆಗಳಿಂದ ಇದಕ್ಕೆ ಅತಿ ಹೆಚ್ಚು ಬೇಡಿಕೆ ಇದೆ. ಇದನ್ನು ಖರೀದಿ ಮಾಡುವ ಉದ್ದೇಶದಿಂದ ಎಸಿಸಿ, ರಾಜಶ್ರೀ ಸಿಮೆಂಟ್‌ ಹಾಗೂ ವಾಸವದತ್ತ ಸಿಮೆಂಟ್‌ ಕಾರ್ಖಾನೆ
ಗಳು ಒಟ್ಟಾಗಿ ಸೇರಿ ‘ಎಆರ್‌ವಿ ಸಿಮೆಂಟ್‌ ಸೊಸೈಟಿ’ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿವೆ.

ಆರ್‌ಟಿಪಿಎಸ್‌ ಮತ್ತು ಎಆರ್‌ವಿ ಸಿಮೆಂಟ್‌ ಸೊಸೈಟಿ ಮಧ್ಯೆ ಖರೀದಿ ಪ್ರಕ್ರಿಯೆಗಾಗಿ ಒಪ್ಪಂದವಾಗಿದೆ.

ಆರ್‌ಟಿಪಿಎಸ್‌ ಎಂಟು ಘಟಕಗಳಲ್ಲಿ ಪ್ರತಿವರ್ಷ 77.63 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಉರಿಸುತ್ತಿದ್ದು, 26.25 ಲಕ್ಷ ಮೆಟ್ರಿಕ್‌ ಟನ್‌ ಬೂದಿ ಹೊರಬರುತ್ತದೆ. ಅದರಲ್ಲಿ ಶೇ 80ರಷ್ಟು ಮಾತ್ರ ಹಾರುಬೂದಿ, ಇನ್ನುಳಿದ ಶೇ 20ರಷ್ಟು ಬೂದಿಯು ನೀರಿನೊಂದಿಗೆ ಸಮ್ಮಿಶ್ರವಾಗಿ ಹೊಂಡಗಳಿಗೆ ತಲುಪುತ್ತದೆ.

***

ಸಿಮೆಂಟ್‌ ಕಂಪೆನಿಗಳು ಹಾರುಬೂದಿಯನ್ನು ಯಥಾಪ್ರಕಾರ ಎತ್ತುವಳಿ ಮಾಡುತ್ತಿವೆ. ಇವರೆಗೂ ಎತ್ತುವಳಿ ವಿಷಯವಾಗಿ ಯಾವುದೇ ಹೊಸ ಮಾಹಿತಿಯನ್ನು ಕಂಪೆನಿಗಳು ನೀಡಿಲ್ಲ.

-ವೇಣುಗೋಪಾಲ್‌, ಆರ್‌ಟಿಪಿಎಸ್‌ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.