ಸಾಂದರ್ಭಿಕ-ಚಿತ್ರ
–ಎ.ಐ ಚಿತ್ರ
ಶಿವಮೊಗ್ಗ: ಕಳೆದ ಐದು ವರ್ಷದಲ್ಲಿ ವಿಶೇಷ ಕಾಳಜಿ ಅಗತ್ಯ ಇರುವ ಕರ್ನಾಟದ 108 ಮಕ್ಕಳನ್ನು ವಿದೇಶದಲ್ಲಿರುವ ದಂಪತಿ ‘ಅಂತರ್ ದೇಶೀಯ ಮಗು ದತ್ತು ಯೋಜನೆ’ಯಡಿ ದತ್ತು ಪಡೆದುಕೊಂಡಿದ್ದಾರೆ. ಆದೇ ಇದೇ ಅವಧಿಯಲ್ಲಿ ಇಂತಹ ಮಕ್ಕಳನ್ನು ದತ್ತು ಪಡೆದ ದೇಶದ ದಂಪತಿ ಸಂಖ್ಯೆ ಕೇವಲ 21. ಈ ಅವಧಿಯಲ್ಲಿ ಒಟ್ಟು 500 ಮಕ್ಕಳು ದತ್ತು ಪಡೆಯಲು ಲಭ್ಯರಿದ್ದರು.
ವಿಶೇಷ ಆರೈಕೆ ಇರುವ ಮಕ್ಕಳನ್ನು ದತ್ತು ಪಡೆಯಲು ಭಾರತದ ದಂಪತಿ ಹಿಂಜರಿಯುತ್ತಿದ್ದಾರೆ ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ದತ್ತಾಂಶದಿಂದ ಇದು ತಿಳಿದು ಬಂದಿದೆ.
ದತ್ತು ಪಡೆದುಕೊಳ್ಳಲು ಭಾರತದ ದಂಪತಿಗೆ ಮೂರು ಬಾರಿ ಅವಕಾಶ ನೀಡಲಾಗುತ್ತದೆ. ಅದಾಗ್ಯೂ ಆ ಮಕ್ಕಳನ್ನು ಯಾರೂ ದತ್ತು ಪಡೆಯದಿದ್ದರೆ ಅಂತರ್ ದೇಶೀಯ ದತ್ತು ಯೋಜನೆಯಡಿ ದತ್ತು ಪಡೆದುಕೊಳ್ಳಬಹುದು.
ಅನೇಕ ಜೈವಿಕ ಪೋಷಕರು ಇಂತಹ ನವಜಾತ ಶಿಶುಗಳನ್ನು ಚರಂಡಿಗಳು ಮತ್ತು ಕೆರೆಗಳ ಬಳಿ ತ್ಯಜಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, 1098ಗೆ ಕರೆ ಮಾಡಿ ಅಥವಾ ಸಂಬಂಧಪಟ್ಟ ಇಲಾಖೆ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿ ಎಂದು ಪೋಷಕರಿಗೆ ಇಲಾಖೆ ಹೇಳಿದೆ. ಜನನ ಪ್ರಮಾಣ ಕಡಿಮೆಯಾಗಿರುವುದರಿಂದ ಹಾಗೂ ಜೈವಿಕವಾಗಿ ಮಕ್ಕಳನ್ನು ಪಡೆದುಕೊಳ್ಳಲು ಅಸಾಧ್ಯವಾಗಿರುವ ವಿದೇಶಿ ದಂಪತಿ ಇಂತಹ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.
ಸೀಳು ತುಟಿ, ಹೃದಯದ ಸಣ್ಣ ಸಮಸ್ಯೆಗಳು, ಕಿವಿಯ ಸಮಸ್ಯೆ ಇತ್ಯಾದಿ ಸಣ್ಣ ಅಂಗವೈಕಲ್ಯ ಇರುವ ಮಕ್ಕಳನ್ನು ದೇಶದೊಳಗಿನ ದಂಪತಿ ದತ್ತು ಪಡೆಯುವುದಿಲ್ಲ. ವೈದ್ಯಕೀಯ ವೆಚ್ಚ ಭರಿಸುವ ಸಾಮರ್ಥ್ಯ ಹೊಂದಿರುವುದರಿಂದ ವಿದೇಶಿ ನಾಗರಿಕರು ಇಂತಹ ಮಕ್ಕಳನ್ನು ದತ್ತು ಪಡೆಯಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಹೇಳಿದರು.
ದೇಶದಲ್ಲಿ ಸಂಬಂಧಿಕರೊಂದಿಗೆ ಮದುವೆ ಪ್ರಮಾಣ ಹೆಚ್ಚಿರುವುದೇ ಅಂಗವೈಕಲ್ಯ ಇರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ. ಇಂತಹ ಮಕ್ಕಳನ್ನು ಹೊರೆ ಎಂಬ ಭಾವನೆಯಿಂದ ಬಹುಪಾಲು ಪೋಷಕರಿಗಿದೆ. ನಾವು ಅಂತಹ ಮಕ್ಕಳ ಆರೋಗ್ಯ ವಿವರಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುತ್ತೇವೆ. ವಿದೇಶಿ ನಾಗರಿಕರು ತಮ್ಮ ವೈದ್ಯರೊಂದಿಗೆ ಆ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಅವರ ವೈದ್ಯರು ಆ ಅಂಗವೈಕಲ್ಯ ಚಿಕಿತ್ಸೆ ಸಾಧ್ಯ ಎಂದು ದೃಢಪಡಿಸಿದ ನಂತರವೇ ದತ್ತು ಪ್ರಕ್ರಿಯೆ ಆರಂಭಿಸುತ್ತಾರೆ’ ಎಂದು ಅವರು ಹೇಳಿದರು.
ಸೀಳು ತುಟಿ ಇರುವ ಶಿವಮೊಗ್ಗ ಒಂದು ಮಗುವನ್ನು ಇತ್ತೀಚೆಗೆ ಅಮೆರಿಕಗೆ ಕಳುಹಿಸಲಾಗಿದೆ. ಇಂಗ್ಲೆಂಡ್, ಕೆನಡಾ, ಫ್ರಾನ್ಸ್ ಮತ್ತು ಐರೋಪ್ಯ ದೇಶಗಳ ನಾಗರಿಕರು ಇಂತಹ ವಿಶೇಷ ಕಾಳಜಿ ಬೇಕಿರುವ ಮಕ್ಕಳನ್ನು ದತ್ತು ಪಡೆಯುತ್ತಾರೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.