ADVERTISEMENT

ಹಂಪಿಯಲ್ಲಿ ಜಿ20 ಸಭೆ ಇಂದಿನಿಂದ: ಹಂಪಿಗೆ ಹೊಸರೂಪ–ಲಕ ಲಕ ಎನ್ನುತ್ತಿವೆ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಹಂಪಿಯ ವಿರೂಪಾಕ್ಷ ದೇವಸ್ಥಾನ ಮುಂಭಾಗದ ರಥಬೀದಿಗೆ ಡಾಂಬರು ಹಾಕಲಾಗಿದೆ.
ಹಂಪಿಯ ವಿರೂಪಾಕ್ಷ ದೇವಸ್ಥಾನ ಮುಂಭಾಗದ ರಥಬೀದಿಗೆ ಡಾಂಬರು ಹಾಕಲಾಗಿದೆ.   –ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ಪಾರಂಪರಿಕ ತಾಣ ಹಂಪಿಯಲ್ಲಿ ಭಾನುವಾರದಿಂದ ಜಿ20 ರಾಷ್ಟ್ರಗಳ 3ನೇ ಕಲ್ಚರಲ್‌ ವರ್ಕಿಂಗ್ ಗ್ರೂಪ್‌ ಸಭೆ ಆರಂಭವಾಗಲಿದ್ದು, 32 ದೇಶಗಳ 52 ಪ್ರತಿನಿಧಿಗಳು ಹಾಗೂ 200ಕ್ಕೂ ಅಧಿಕ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಕಲ್ಚರಲ್‌ ವರ್ಕಿಂಗ್ ಗ್ರೂಪ್‌ ಸಭೆ 12ರಂದು ಕೊನೆಗೊಳ್ಳಲಿದ್ದು, 13ರಿಂದ 3ನೇ ಶೆರ್ಪಾ ಸಭೆ ಆರಂಭವಾಗಲಿದೆ. 16ರಂದು ಸಭೆ ಕೊನೆಗೊಳ್ಳಲಿದೆ.

ಹಂಪಿ ಸಮೀಪದ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ (ಇವಾಲ್ವ್‌ ಬ್ಯಾಕ್‌) ಶೃಂಗಸಭೆ ನಡೆಯಲಿದೆ. ಈ ಎರಡೂ ಸಭೆಗಳು ದೆಹಲಿಯಲ್ಲಿ ಕೊನೆಯದಾಗಿ ನಡೆಯುವ ಜಿ20 ಸಭೆಯ ಪೂರ್ವಭಾವಿ ಸಭೆಗಳಾಗಿರುವುದರಿಂದ ಇಲ್ಲಿ ಹಲವು ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ.

ADVERTISEMENT

ಸಭೆಯಲ್ಲಿ  ಜಿ20 ರಾಷ್ಟ್ರಗಳ ಪೈಕಿ 19 ದೇಶಗಳ 30 ಮಂದಿ ಪ್ರತಿನಿಧಿಗಳು, ಒಂಬತ್ತು ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಹಾಗೂ ನಾಲ್ಕು ಅಂತರರಾಷ್ಟ್ರೀಯ ಸಂಘಟನೆಗಳ ಆರು ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

‘ಭಾನುವಾರ ತೋರಣಗಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಕಲ್ಚರಲ್‌ ವರ್ಕಿಂಗ್‌ ಗುಂಪಿನ ವಿದೇಶಿ ಗಣ್ಯರು ಬಳಿಕ ಆರೆಂಜ್‌ ಕೌಂಟಿಗೆ  ಬರಲಿದ್ದಾರೆ. ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಿರಂತರ ಸಭೆಗಳು ಅಲ್ಲಿ ನಡೆಯಲಿವೆ. ಸಂಜೆ ಹಂಪಿಯ ಎದುರುಬಸವಣ್ಣ ಸಮೀಪ ಗಣ್ಯರಿಗೆ ಒಂದು ಸಾಂಸ್ಕೃತಿಕ ಪ್ರದರ್ಶನ ನಡೆಯಲಿದ್ದು, ಸ್ಥಳೀಯ ಭೋಜನದ ವ್ಯವಸ್ಥೆ ಮಾಡಲಾಗಿದೆ. ಶೆರ್ಪಾ ಸಭೆಯಲ್ಲಿ ಪಾಲ್ಗೊಳ್ಳುವ ವಿದೇಶಿ ಗಣ್ಯರು  13ರಂದು ಬರಲಿದ್ದು, 14ರಂದು ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಜೆ ಸ್ಥಳೀಯ ಭೋಜನ ಸವಿಯಲಿದ್ದಾರೆ’ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದ್ದಾರೆ.

‘ಇದೇ 10 ಮತ್ತು 14ರಂದು ಮಾತ್ರ ವಿದೇಶಿ ಗಣ್ಯರು  ಹಂಪಿಯ ಕೆಲವು ಸ್ಮಾರಕಗಳನ್ನು ನೋಡಲಿದ್ದು, ಅವರು ಭೇಟಿ ನೀಡುವುದಕ್ಕೆ ಕೇವಲ ಎರಡು ಗಂಟೆ ಮೊದಲು ಇತರ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುವುದು. ಉಳಿದಂತೆ ಪ್ರವಾಸಿಗರಿಗೆ ಹಂಪಿಗೆ ಬರುವುದಕ್ಕೆ ಯಾವುದೇ ನಿರ್ಬಂಧ ಇಲ್ಲ’ ಎಂದು ಅವರು ಹೇಳಿದ್ದಾರೆ.

ಹಂಪಿಗೆ ಶನಿವಾರ ಭೇಟಿ ನೀಡಿದ ಗುಪ್ತಚರ ವಿಭಾಗದ ಡಿಐಜಿ ರಾಮಕೃಷ್ಣ ಅವರು ತೆಪ್ಪದಲ್ಲಿ ಸಂಚರಿಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಜಿ20 ಶೃಂಗದಲ್ಲಿ ಪಾಲ್ಗೊಳ್ಳುವ ಗಣ್ಯರ ಪೈಕಿ ಕೆಲವರು ತೆಪ್ಪ ಸವಾರಿ ನಡೆಸುವ ಸಾಧ್ಯತೆ ಇರುವುದರಿಂದ ಈ ಪರಿಶೀಲನೆ ನಡೆಸಲಾಯಿತು 

ಹಂಪಿಗೆ ಹೊಸ ಮೆರುಗು

ಜಿ20 ಶೃಂಗಸಭೆಗಾಗಿ ಹಂಪಿಯು ಈ ಹಿಂದೆ ಕಂಡು ಕೇಳರಿಯದ ಮಾದರಿಯಲ್ಲಿ ತನ್ನ ಚಹರೆ ಬದಲಿಸಿಕೊಂಡಿದೆ.  ವಿರೂಪಾಕ್ಷ ದೇವಸ್ಥಾನದಿಂದ ಪೊಲೀಸ್ ಠಾಣೆವರೆಗೆ ಡಾಂಬರು ಹಾಕಲಾಗಿದೆ. ಸುತ್ತಮುತ್ತ ಸ್ವಚ್ಛಗೊಳಿಸಲಾಗಿದೆ. ಮತ್ತೊಂದೆಡೆ ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಹ ಸುಸಜ್ಜಿತ  ಮಣ್ಣಿನ  ರಸ್ತೆ ನಿರ್ಮಿಸಲಾಗಿದ್ದು ಹಲವು ಕಡೆಗಳಲ್ಲಿ ಮರಗಿಡಗಳ ಟೊಂಗೆ ಕತ್ತರಿಸಿದ್ದರಿಂದ ಸ್ಮಾರಕಗಳು ದೂರಕ್ಕೆ ಕಾಣಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.