ADVERTISEMENT

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಯುವಕರು ದೋಷಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:20 IST
Last Updated 6 ಫೆಬ್ರುವರಿ 2026, 16:20 IST
ತೀರ್ಪು
ತೀರ್ಪು   

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆ ಬಳಿ ತುಂಗಾಭದ್ರ ಎಡದಂಡೆ ಸಮೀಪ ಕಳೆದ ವರ್ಷ ವಿದೇಶಿ ಮಹಿಳೆ, ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ನಡೆದ ಅತ್ಯಾಚಾರ ಹಾಗೂ ಓರ್ವ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿ ಎಂದು ಆದೇಶಿಸಿದೆ. ಶಿಕ್ಷೆ ಪ್ರಮಾಣ ಫೆ. 16ರಂದು ಪ್ರಕಟಿಸುವುದಾಗಿ ತಿಳಿಸಿದೆ.

ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಒಂಬತ್ತು ತಿಂಗಳ ಒಳಗಾಗಿ ಎಲ್ಲ ವಿಚಾರಣೆ ಮುಗಿದಿದೆ.

ಈ ಪ್ರಕರಣದಲ್ಲಿ ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯ ಸಾಯಿ), ಶರಣಪ್ಪ (ಶರಣು ಬಸವರಾಜ್) ಎನ್ನುವವರು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿ‌ಸಿದೆ.

ಘಟನೆ ವಿವರ: ಕಳೆದ ಮಾರ್ಚ್‌ನಲ್ಲಿ, ಐವರು ಪ್ರವಾಸಿಗರ ತಂಡ ಸಾಣಾಪುರ ಕೆರೆ ಬಳಿ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಮಧ್ಯ ರಾತ್ರಿ ರಸ್ತೆಯಲ್ಲಿ ಸಂಗೀತ ಆಲಿಸುತ್ತ ನಕ್ಷತ್ರಗಳನ್ನು ಎಣಿಕೆ ಮಾಡುತ್ತಿದ್ದರು. ಈ ವೇಳೆ ಬೈಕಿನಲ್ಲಿ ಮೂವರು ಯುವಕರು ಹಣ ನೀಡುವಂತೆ ಪೀಡಿಸಿದ್ದರು. ಹಣ ನೀಡದ ಕಾರಣಕ್ಕೆ ಇಸ್ರೇಲ್ ದೇಶದ ಮತ್ತು ಸ್ಥಳೀಯ ಹೋಂ ಸ್ಟೇ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ್ದರು.

ಇವರ ರಕ್ಷಣೆಗೆ ಬಂದ ಅಮೆರಿಕದ ಪ್ರವಾಸಿಗ ಡೇನಿಯಲ್, ಒಡಿಶಾ ಮೂಲದ ಬಿಬಾಶ್ ಅವರನ್ನು ನೀರಿಗೆ ತಳ್ಳಿದ್ದರು. ಘಟನೆಯಲ್ಲಿ ಬಿಬಾಶ್ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.