ADVERTISEMENT

ಸಂಭಾವಿತರು ಎನಿಸಿಕೊಳ್ಳುವವರು ಕ್ಯಾಸಿನೊಗಾಗಿ ಸಿಂಗಪುರಕ್ಕೆ ಹೋಗ್ತಾರೆ: ಸಿಟಿ ರವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 13:45 IST
Last Updated 24 ಫೆಬ್ರುವರಿ 2020, 13:45 IST
ಸಚಿವ ಸಿ.ಟಿ. ರವಿ
ಸಚಿವ ಸಿ.ಟಿ. ರವಿ   

ಚಿಕ್ಕಮಗಳೂರು: ‘ಯಾವ್ಯಾವ ಗೆಳೆಯರು ತಟ್ಟಲು (ಕ್ಯಾಸಿನೊ) ಹೋದರೆ ಮೂರು ದಿನಗಟ್ಟಲೇ ಹೊರಗೆ ಬರುತ್ತಿರಲಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವಲೋಕನ ಮಾಡಿಕೊಳ್ಳಬೇಕು. ಆರೋಪ ಮಾಡುವವರು ಎಷ್ಟು ಸಾಚಾ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿವಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಲ್ಲಿ ಸಂಭಾವಿತರು ಎಂದು ತೋರಿಸಿಕೊಳ್ಳುವವರು ಆಗಾಗ ಕ್ಯಾಸಿನೊಕ್ಕಾಗಿ (ಜೂಜು ಕೇಂದ್ರ) ಸಿಂಗಪುರಕ್ಕೆ ಹೋಗುತ್ತಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಶನಿವಾರ, ಭಾನುವಾರ ಎಷ್ಟು ಅಧಿಕಾರಿಗಳು, ಶಾಸಕರು ಗೋವಾಗೆ ಕ್ಯಾಸಿನೊಗೆ ಹೋಗಿಬರುತ್ತಾರೆ ಎಂದು ಹೇಳಲಾಗದು. ಯಾರಿಗೆ ಎಷ್ಟು ಲಾಭವಾಯಿತು ಎಂಬುದೇ ಮರುದಿನ ವಿಧಾನಸಭೆ ಮೊಗಸಾಲೆಯ ಚರ್ಚೆ ವಿಷಯ. ವಾಸ್ತವಿಕ ಸತ್ಯ ಹೇಳಿದ್ದೇನೆ ಅಷ್ಟೆ’ ಎಂದು ಹೇಳಿದರು.

‘ಕ್ಯಾಸಿನೊ ಇರುವ ಕಡೆಗಳಲ್ಲಿ ಸ್ಥಳೀಯರ ಪ್ರವೇಶಕ್ಕೆ ಅವಕಾಶ ಇಲ್ಲ. ದುಡ್ಡು ಖರ್ಚು ಮಾಡಲು ಬರುವ ಪ್ರವಾಸಿಗರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಆ ಮೂಲಕ ಲಾಭಗಳಿಸುತ್ತಾರೆ. ಚರ್ಚೆಯ ವಿಷಯವಾಗಿ ಈ ಆಂಶ ಪ್ರಸ್ತಾಪಿಸಿದ್ದೆ. ರಾಜ್ಯದಲ್ಲಿ ಕ್ಯಾಸಿನೊ ಶುರು ಮಾಡುತ್ತೇವೆ ಎಂದು ಹೇಳಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಮಡಿವಂತಿಕೆ ಇಟ್ಟುಕೊಂಡು ವ್ಯಾಪಾರ ಮಾಡಲಾಗದು. ಮಡಿವಂತರು ಎಂದು ಹೇಳಿಕೊಳ್ಳುವವರ ಬದುಕು ಒಂದು ರೀತಿ, ಮಾತೊಂದು ರೀತಿ ಇರಬಾರದು’ ಎಂದು ತಿಳಿಸಿದರು.

‘ಗೋ ಬ್ಯಾಂಕ್‌ ಟ್ರಂಪ್‌’ ಕೂಗಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ

‘ಗೋ ಬ್ಯಾಂಕ್‌ ಟ್ರಂಪ್‌’ ಎಂದು ಕೆಲವರು ಹೇಳಿದ್ದಾರೆ, ದ್ವೇಷ ಕಟ್ಟಿಕೊಂಡೇ ಹುಟ್ಟಿದವರು ಇಂಥವನ್ನು ಮಾಡುತ್ತಾರೆ. ಆ ಮಾತುಗಳಿಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ, ಡ್ಯಾಶ್‌ ಡ್ಯಾಶ್‌ ಡ್ಯಾಶ್‌’ ಎಂದು ರವಿ ಉತ್ತರಿಸಿದರು.

‘ಗುಣ ವಂಶಪಾರಂಪರ್ಯ ಅಲ್ಲ. ವೀರಪ್ಪನ್‌ ಪುತ್ರಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಪ್ಪನ ದಾರಿ ಬೇರೆ ಇತ್ತು. ಕರ್ನಾಟಕ ಮತ್ತು ವನ್ಯಜೀವಿಗಳ ನೆಲೆಯಲ್ಲಿ ಅಪ್ಪನ ರೀತಿ ಪುತ್ರಿ ಆಗಬಾರದು ಎಂಬುದು ನಮ್ಮ ಇಚ್ಛೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.