ನವದೆಹಲಿ: ಗೋದಾವರಿ–ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸೇರಿದಂತೆ ಪಾಲುದಾರ ರಾಜ್ಯಗಳು, ನೀರಿನ ಪಾಲನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸ್ಪಷ್ಟಪಡಿಸಿವೆ.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಅಂತರ್ ನದಿಗಳ ಜೋಡಣೆಯ ವಿಶೇಷ ಸಮಿತಿಯ 23ನೇ ಸಭೆ ಒಮ್ಮತಾಭಿಪ್ರಾಯಕ್ಕೆ ಬರುವಲ್ಲಿ ವಿಫಲವಾಯಿತು. ಇನ್ನೊಂದೆಡೆ, ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿತು. ನದಿ ಜೋಡಣೆಗೆ ತಾತ್ವಿಕ ಒಪ್ಪಿಗೆ ವ್ಯಕ್ತಪಡಿಸಿರುವ ತೆಲಂಗಾಣವು, ಪೋಲವರಂನಿಂದಲೇ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದಿತು.
ನೀರಿನ ಹಂಚಿಕೆ ಬಗ್ಗೆ ರಾಜ್ಯಗಳ ಆತಂಕ ನಿವಾರಿಸಲು ಪಾಲುದಾರ ರಾಜ್ಯಗಳ ಜತೆಗೆ ವಿಶೇಷ ಸಭೆ ಕರೆಯಬೇಕು ಎಂದು ಪಾಟೀಲ ಅವರು ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ. ರಾಜ್ಯಕ್ಕೆ ನೈಜವಾಗಿ 2.19 ಟಿಎಂಸಿ ಅಡಿ ಮಾತ್ರ ಸಿಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬುದು ಕರ್ನಾಟಕದ ಪ್ರಮುಖ ತಕರಾರು. ಈ ಮಹಾ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಧ್ವನಿ ಎತ್ತಿದೆ.
ಗೋದಾವರಿ–ಕಾವೇರಿ ನದಿಗಳ ಜೋಡಣೆ ಯೋಜನೆಯಲ್ಲಿ ಗೋದಾವರಿ–ಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾ–ಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್–ಕಾವೇರಿ ನದಿಗಳ ಜೋಡಣೆ ಮಾಡಲಾಗುವುದು. ಗೋದಾವರಿ ಕಣಿವೆಯ ಹೆಚ್ಚುವರಿ 248 ಟಿಎಂಸಿ ಅಡಿ ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯಗಳು ಒಪ್ಪಿರಲಿಲ್ಲ. ಬಳಿಕ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಗೋದಾವರಿ ನದಿಯ ಉಪನದಿ ಇಂದ್ರಾವಳಿಯಲ್ಲಿ ಬಳಕೆಯಾಗದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವು ಯೋಜನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬೇಡ್ತಿ–ವರದಾ ನದಿ ಜೋಡಣೆಯಿಂದ 18 ಟಿಎಂಸಿ ಅಡಿ ನೀರು ದೊರಕಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ:
ರಾಜ್ಯದಲ್ಲಿ ಸಾಕಷ್ಟು ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಈ ಪ್ರದೇಶಗಳಿಗೆ ನೀರುಣಿಸಲು ನದಿ ಜೋಡಣೆಯ ಸಂದರ್ಭದಲ್ಲಿ ದೊಡ್ಡ ಪಾಲು ನೀಡಬೇಕು. ಹೆಚ್ಚುವರಿ 147.93 ಟಿಎಂಸಿ ಅಡಿ ನೀರಿನಲ್ಲಿ ಕನಿಷ್ಠ 40 ಟಿಎಂಸಿ ಅಡಿಯನ್ನಾದರೂ ಒದಗಿಸಬೇಕು. ನೀರಿನ ಹಂಚಿಕೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಕರ್ನಾಟಕದ ಬರಪೀಡಿತ ಪ್ರದೇಶ ಕಾರ್ಯಕ್ರಮದ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿಗಳನ್ನು ರಾಜ್ಯದ ಜತೆಗೆ ಹಂಚಿಕೊಳ್ಳಬೇಕು.
ಮಹಾರಾಷ್ಟ್ರ:
ಕೃಷ್ಣಾ ನದಿ ನೀರು ನ್ಯಾಯಮಂಡಳಿಯು ರಾಜ್ಯಕ್ಕೆ ನಿರ್ದಿಷ್ಟ ಪ್ರಮಾಣದ ನೀರು ಹಂಚಿಕೆ ಮಾಡಿದೆ. ಹೆಚ್ಚುವರಿ ನೀರು ಕೇಳಲು ಅವಕಾಶ ಇಲ್ಲ. ಒಂದು ವೇಳೆ, ನದಿ ತಿರುವು ಯೋಜನೆಯಡಿ ಹೆಚ್ಚುವರಿ ನೀರನ್ನು ಕೃಷ್ಣಾ ಜಲಾನಯನ ಪ್ರದೇಶಕ್ಕೆ ಬಿಡುಗಡೆ ಮಾಡಿದರೆ ಮಹಾರಾಷ್ಟ್ರಕ್ಕೆ ನ್ಯಾಯಬದ್ಧ ಪಾಲು ನೀಡಬೇಕು.
ಆಂಧ್ರ ಪ್ರದೇಶ:
ನದಿ ಜೋಡಣೆಯ ಸ್ವರೂಪವೇ ವೈಜ್ಞಾನಿಕವಾಗಿಲ್ಲ. ಇಂದ್ರಾವಳಿಯಿಂದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ. ಇಂದ್ರಾವಳಿ ನೀರನ್ನು ಬಳಸಿಕೊಳ್ಳಲು ಛತ್ತೀಸಗಢ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದಾಗಿ ನೀರಿನ ಲಭ್ಯತೆ ಕಡಿಮೆಯಾಗಲಿದೆ ಹಾಗೂ ಆಂಧ್ರ ಪ್ರದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದಲ್ಲದೇ, ನೆರೆಯ ತೆಲಂಗಾಣವು ಅನೇಕ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ನದಿ ಜೋಡಣೆ ಯೋಜನೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಿದರೆ ಆಂಧ್ರದ ಈಗಿನ ಹಾಗೂ ಹೊಸ ಯೋಜನೆಗಳಿಗೆ ಭಾರಿ ಹೊಡೆತ ಬೀಳಲಿದೆ.
ಪುದುಚೆರಿ:
ಕೇಂದ್ರಾಡಳಿತ ಪ್ರದೇಶದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚುವರಿ ನೀರು ಹಂಚಿಕೆ ಮಾಡಬೇಕು. ಅಂತರ್ ರಾಜ್ಯ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರವು ವಿಶೇಷ ಅನುದಾನ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.