ADVERTISEMENT

ಚಾಮುಂಡೇಶ್ವರಿಗೆ ಚಿನ್ನದ ರಥ: ಪ್ರಸ್ತಾವ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:33 IST
Last Updated 24 ನವೆಂಬರ್ 2024, 15:33 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ತಕ್ಷಣ ಪ್ರಸ್ತಾವ ಸಲ್ಲಿಸುವಂತೆ ಕಂದಾಯ ಇಲಾಖೆಯ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಚಿನ್ನದ ರಥ ನಿರ್ಮಿಸಬೇಕೆಂಬ ಭಕ್ತರ ಬೇಡಿಕೆ, ಸಂಕಲ್ಪದ ಕುರಿತು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

‘ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕೆಂಬುದು ಭಕ್ತರ ಬೇಡಿಕೆ. ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವವನ್ನು ಸರ್ಕಾರ ತಯಾರಿಸಬೇಕು. ಈ ಉದ್ದೇಶಕ್ಕೆ ದೇವಸ್ಥಾನದಲ್ಲಿ ಪ್ರತ್ಯೇಕ ಹುಂಡಿ ಇಡಬೇಕು. ಸಂಗ್ರಹವಾದ ಕಾಣಿಕೆಗಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ADVERTISEMENT

ದಿನೇಶ್‌ ಗೂಳಿಗೌಡ

‘ದೇವಸ್ಥಾನದಲ್ಲಿರುವ ಈಗಿನ ಮರದ ರಥವನ್ನು 1982ರಲ್ಲಿ ಕೊಯಮುತ್ತೂರಿನ ಭಕ್ತಾದಿಗಳು ಮಾಡಿಸಿದ್ದರು ಎನ್ನಲಾಗುತ್ತದೆ. ಹಾಲಿ ರಥವೂ ಶಿಥಿಲವಾಗುತ್ತ ಬಂದಿದೆ. ಹೀಗಾಗಿ, ಹೊಸ ಚಿನ್ನದ ರಥ ನಿರ್ಮಿಸಿ, ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು ಎಂಬುದು ಭಕ್ತರ ಸಂಕಲ್ಪ. ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಅದಕ್ಕೆ ಸುಮಾರು ₹100 ಕೋಟಿ ಬೇಕಾಗಬಹುದು ಎಂದೂ ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಈಡೇರಿಲ್ಲ. ಮುಂದಿನ ದಸರಾದ ಒಳಗಡೆ ರಥ ನಿರ್ಮಿಸಿ, ರಥೋತ್ಸವ ಮಾಡಬೇಕು ಎಂಬುದು ಭಕ್ತರ ಬೇಡಿಕೆ ಎಂದು ಮನವಿಯಲ್ಲಿ ವಿವರಿಸಿದ್ದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.