ADVERTISEMENT

ಅಂಗವಿಕಲರ ದಿನ ಮರೆತ ಸರ್ಕಾರ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 21:42 IST
Last Updated 4 ಡಿಸೆಂಬರ್ 2020, 21:42 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಅಂಗವಿಕಲರನ್ನು ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದತ್ತ ಕೊಂಡೊಯ್ಯಲು ಪ್ರೇರೇಪಿಸುವ ವಿಶ್ವ ಅಂಗವಿಕಲ ದಿನದ ಆಚರಣೆಯನ್ನು ಸರ್ಕಾರ ಮರೆತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಡಿಸೆಂಬರ್ 3ರಂದು ಇಡೀ ವಿಶ್ವವೇ ಅಂಗವಿಕಲ ದಿನವನ್ನು ಆಚರಿಸಿದೆ. ಆದರೆ, ಕರ್ನಾಟಕ ಸರ್ಕಾರ ಕಳೆದ ವರ್ಷದಿಂದ ಈ ಆಚರಣೆಯನ್ನೇ ಮರೆತಿದೆ ಎಂದು ಅಂಗವಿಕಲರ ಸಮುದಾಯದವರು ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

ಜಾತಿ ಸೂಚಕ ಸಮುದಾಯಗಳನ್ನು ಹುಡುಕಿ ದಿನಾಚರಣೆ ಘೋಷಣೆಯನ್ನು ಸರ್ಕಾರ ಮಾಡುತ್ತಿದೆ. ಆದರೆ, ಎಲ್ಲ ಜಾತಿಯಲ್ಲೂ ಅಂಗವಿಕಲರಿದ್ದು, ಆರ್ಥಿಕವಾಗಿ ಏನೂ ನೆರವು ಸಿಗದ ಶೋಷಿತ ಸಮುದಾಯವಾಗಿಯೇ ಉಳಿದಿದ್ದಾರೆ. ಸರ್ಕಾರಗಳಿಗೆ ಕಾಳಜಿ ಇದ್ದರೆ ಇಂತಹ ಅಲಕ್ಷಿತ ಸಮುದಾಯದವರ ಏಳಿಗೆಗೆ ಆದ್ಯತೆ ಮೇರೆಗೆ ಕಾರ್ಯಕ್ರಮ ರೂಪಿಸಬೇಕು. ಅಂಗವಿಕಲರ ಅಧಿನಿಯಮದಡಿ ನೇಮಕವಾಗಿರುವ ಆಯುಕ್ತರ ಅವಧಿ ಮುಗಿಯಲು ಇನ್ನು ಎರಡು ತಿಂಗಳಷ್ಟೇ ಇದೆ. ಮುಂದಿನ ಆಯುಕ್ತರ ನೇಮಕಾತಿ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಇದ್ದಂತಿಲ್ಲ ಎಂದು ಚಂದ್ರಶೇಖರ ಪುಟ್ಟಪ್ಪ ದೂರಿದ್ದಾರೆ.

ADVERTISEMENT

ಅಂಗವಿಕಲರು ಸ್ವಂತ ಉದ್ದಿಮೆ ನಡೆಸಲು ರಾಷ್ಟ್ರೀಯ ಅಂಗವಿಕಲ ಹಣಕಾಸು ಅಭಿವೃದ್ಧಿ ನಿಗಮದಡಿ (ಎನ್‌ಎಚ್‌ಡಿಸಿ) ನೀಡುತ್ತಿದ್ದ ಸಾಲ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಅಂಗವಿಕಲರು ಉದ್ಯೋಗ ಕಂಡುಕೊಳ್ಳುವ ದಾರಿಯನ್ನೂ ಸರ್ಕಾರ ಮುಚ್ಚಿದೆ. ಅಂಗವಿಕಲರ ಅಭಿವೃದ್ಧಿ ನಿಗಮದ ಬೇಡಿಕೆಯೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.