ADVERTISEMENT

ಯಾವುದೋ ವಿದ್ಯಾರ್ಥಿಗಳಿಗೆ ಇನ್ಯಾವುದೊ ಪಠ್ಯಕ್ರಮ ಬೋಧನೆ

ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

ಸದಾಶಿವ ಎಂ.ಎಸ್‌.
Published 12 ಜನವರಿ 2019, 20:32 IST
Last Updated 12 ಜನವರಿ 2019, 20:32 IST
   

ಕಾರವಾರ: ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ನಡೆಯುತ್ತಿರುವ ಎಡವಟ್ಟುಗಳಿಗೆ ಇಲ್ಲೊಂದು ತಾಜಾ ಉದಾಹರಣೆ ಇದೆ.

ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕರು,ಯಾವುದೋ ವಿದ್ಯಾರ್ಥಿಗಳಿಗೆ ಇನ್ಯಾವುದೊ ಪಠ್ಯಕ್ರಮ ಬೋಧನೆ ಮಾಡಿ ಸುದ್ದಿಯಲ್ಲಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಈ ಬಾರಿ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ಆದರೆ, ಇದನ್ನು ಗಮನಿಸದ ಉಪನ್ಯಾಸಕರು ಹಳೇ ಪಠ್ಯಕ್ರಮವನ್ನೇ ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ನ ಕೊನೆವರೆಗೂ ಬೋಧಿಸಿದ್ದಾರೆ!

ಭೌತ ವಿಜ್ಞಾನದ ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿದ್ದ ಎಂಜಿನಿಯರಿಂಗ್ ಗ್ರಾಫಿಕ್ಸ್ ಅನ್ನು ರಾಸಾಯನಿಕ ವಿಜ್ಞಾನ ವೃತ್ತದ (ಸರ್ಕಲ್) ವಿದ್ಯಾರ್ಥಿಗಳಿಗೆ ಬೋಧಿಸಲಾಗಿದೆ. ಅಂತೆಯೇ ರಾಸಾಯನ ವಿಜ್ಞಾನದ ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕಿದ್ದ ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಎಂಜಿನಿಯರಿಂಗ್ ವಿಷಯವನ್ನು ಭೌತ ವಿಜ್ಞಾನ ವೃತ್ತದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.

ತರಗತಿಗಳು ಆಗಸ್ಟ್‌ನಲ್ಲಿ ಆರಂಭವಾದರೂ ಡಿಸೆಂಬರ್‌ವರೆಗೂ ಈ ಪ್ರಮಾದ ಅರಿವಿಗೇ ಬರಲಿಲ್ಲ. ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಡಿ.29ರಂದು ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುವಾಗ ವಿಚಾರ ಬೆಳಕಿಗೆ ಬಂತು. ಉಪನ್ಯಾಸಕರು ಕೂಡಲೇ ಹೊಸ ಪಠ್ಯಕ್ರಮದ ಬೋಧನೆ ಆರಂಭಿಸಿದರು. ಪರೀಕ್ಷೆಗೆ ಒಂದು ತಿಂಗಳು ಇರುವಾಗ ಪಠ್ಯವನ್ನು ಮನನ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆ 110 ವಿದ್ಯಾರ್ಥಿಗಳದ್ದಾಗಿದೆ.

ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ವಿಟಿಯು ಕುಲಸಚಿವ ಡಾ.ಜಗನ್ನಾಥ ರೆಡ್ಡಿ ಭರವಸೆ ನೀಡಿದ್ದಾರೆ. ವಿಟಿಯುನ ಸತ್ಯ ಪರಿಶೋಧನಾ ಸಮಿತಿ ಸದಸ್ಯರೂ ಕಾಲೇಜಿಗೆ ಜ.7ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.