ADVERTISEMENT

ಕಾಂಬೋಡಿಯದಲ್ಲಿ ಸಿಲುಕಿರುವ ಎಂಜಿನಿಯರ್‌ ರಕ್ಷಣೆಗೆ ಪ್ರಯತ್ನ -ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 15:40 IST
Last Updated 18 ಫೆಬ್ರುವರಿ 2023, 15:40 IST
   

ಬೆಂಗಳೂರು: ಅಕ್ರಮ ನೇಮಕಾತಿ ಜಾಲದಿಂದ ಮೋಸಕ್ಕೊಳಗಾಗಿ ಕಾಂಬೋಡಿಯ ದೇಶದಲ್ಲಿ ಅಪಾಯದ ಸ್ಥಿತಿಯಲ್ಲಿ ಸಿಲುಕಿರುವ ತೀರ್ಥಹಳ್ಳಿ ತಾಲ್ಲೂಕಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಕಿರಣ್‌ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

‘ಹೆಚ್ಚಿನ ವೇತನ ಕೊಡಿಸುವ ಆಮಿಷ ಒಡ್ಡಿದ್ದ ನೇಮಕಾತಿ ಏಜೆನ್ಸಿಯ ಮಾತು ನಂಬಿ ಕಾಂಬೋಡಿಯ ದೇಶಕ್ಕೆ ಹೋಗಿದ್ದ ಕಿರಣ್‌ ಮೋಸಹೋಗಿದ್ದಾರೆ. ಅವರು ಈಗ ಅಲ್ಲಿನ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ. ರಕ್ಷಿಸಿ ಕರೆತರಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರ್‌ ಅವರ ಕಚೇರಿ ಜತೆ ಸತತ ಸಂಪರ್ಕದಲ್ಲಿದ್ದೇನೆ’ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ತಮ್ಮ ಮಗನನ್ನು ಖಾಸಗಿ ಕಂಪನಿ ವಶದಿಂದ ಬಿಡಿಸಿ, ಸುರಕ್ಷಿತವಾಗಿ ಕರೆತರುವಂತೆ ಕಿರಣ್‌ ಸಹೋದರ ಪವನ್ ಶೆಟ್ಟಿ ಮನವಿ ಮಾಡಿದ್ದಾರೆ. ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.