ಬೆಂಗಳೂರು: ರಾಜ್ಯದ 30 ಜಿಲ್ಲಾ ಪಂಚಾಯತ್ಗಳು ಮತ್ತು 177 ತಾಲ್ಲೂಕು ಪಂಚಾಯತ್ಗಳಿಗೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ ನೀಡಿಕೆ ದುಪ್ಪಟ್ಟು ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ವಿವರ ನೀಡಿದರು.
ಜಿಲ್ಲಾ ಪಂಚಾಯತ್ಗಳ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಿರ್ಣದ ಆಧಾರದ ಮೇಲೆ ಕನಿಷ್ಠ ₹ 4 ಕೋಟಿಯಿಂದ ಗರಿಷ್ಠ ₹ 8 ಕೋಟಿ
ಯವರೆಗೆ ಅನುದಾನ ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ₹172.07 ಕೋಟಿ ಅನುದಾನ ನಿಗದಿಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಅಲ್ಲದೆ, 177 ತಾಲ್ಲೂಕುಗಳಿಗೆ ಈಗ ನೀಡುತ್ತಿರುವ ₹ 1 ಕೋಟಿಯ ಬದಲಾಗಿ ₹ 2 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗುವುದು. ಮುಂದಿನ ವರ್ಷದಿಂದ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತೀರ್ಣ ಆಧರಿಸಿ ಕನಿಷ್ಠ ₹ 2 ಕೋಟಿಯಿಂದ ಗರಿಷ್ಠ ₹ 3 ಕೋಟಿವರೆಗೆ ಅನುದಾನ ಹಂಚಲು ತೀರ್ಮಾನಿಸಲಾಗಿದೆ.
ಆಲೂಗಡ್ಡೆ ಬೆಳೆಗಾರರಿಗೆ ಬಂಪರ್ ಪ್ಯಾಕೇಜ್: ಆಲೂಗಡ್ಡೆ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಆಲೂಗಡ್ಡೆ ಬೆಳೆಯುವ ರೈತರಿಗೆ ಬಿತ್ತನೆ ಬೀಜ ಖರೀದಿಸಲು ಪ್ರತಿ ಹೆಕ್ಟೇರ್ಗೆ ₹7,500 ಮತ್ತು ಸಸ್ಯ ಸಂರಕ್ಷಣಾ ಔಷಧಿ ಖರೀದಿಗೆ ಪ್ರತಿ ಹೆಕ್ಟೇರ್ಗೆ ₹7,200 ರಂತೆ ಒಟ್ಟು ₹14,700 ಪ್ರೋತ್ಸಾಹ ಧನ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಜಿಂದಾಲ್ಗೆ ಜಮೀನು: ತೀರ್ಮಾನ ಆಗಿಲ್ಲ
ಜಿಂದಾಲ್ಗೆ ಜಮೀನು ಮಾರಾಟ ಮಾಡುವ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಲಾಗಿದೆ. ಆತುರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಇಲ್ಲ ಎಂದೂ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.