ADVERTISEMENT

ಗ್ರಾ.ಪಂ ಚುನಾವಣೆ: ಕಾಯ್ದೆ ಧಿಕ್ಕರಿಸಿ ಕೆಲಸ ಮಾಡಬೇಡಿ

​ಪ್ರಜಾವಾಣಿ ವಾರ್ತೆ
Published 19 ಮೇ 2020, 21:08 IST
Last Updated 19 ಮೇ 2020, 21:08 IST

ಬೆಂಗಳೂರು: ‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಕುರಿತಂತೆ ಸಂವಿಧಾನ ಹಾಗೂ ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಸುದೀರ್ಘ ಪತ್ರ ಬರೆದಿರುವ ಪಾಟೀಲರು, ‘ಸಂವಿಧಾನದ ಅನುಚ್ಛೇದ 243ಇ(3)ರ ಅನ್ವಯ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯಂತೆ, ಗ್ರಾಮ ಪಂಚಾಯಿತಿಗಳಿಗೆ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಸಂವಿಧಾನ ಮತ್ತು ಕಾಯ್ದೆ ಧಿಕ್ಕರಿಸಿ ಚುನಾವಣಾ ಆಯೋಗ ಕೆಲಸ ಮಾಡಬಾರದು’ ಎಂದಿದ್ದಾರೆ.

‘ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ದಿನನಿತ್ಯದ ಚಟುವಟಿಕೆ, ಮದ್ಯದಂಗಡಿಯಿಂದ ಹಿಡಿದು ಎಲ್ಲವನ್ನೂ ಆರಂಭಿಸಿರುವಾಗ
ಚುನಾವಣೆ ಮುಂದೂಡುವ ಯಾವುದೇ ಪ್ರಯತ್ನ ಮಾಡಬಾರದು. ಯಾವುದೇ ಪಂಚಾಯಿತಿ ಪ್ರದೇಶದಲ್ಲಿ
ಸದ್ಯ ಕಂಟೈನ್‌ಮೆಂಟ್ ಪ್ರದೇಶ ಇಲ್ಲ. ಅಂಥ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಯಾವುದೇ ತೊಂದರೆ ಇಲ್ಲ. ಸಂವಿಧಾನ ಮತ್ತು ಕಾಯ್ದೆಯನ್ನು ಪಾಲಿಸಲೇಬೇಕಾದ ಉತ್ತರದಾಯಿತ್ವ ಚುನಾವಣಾ ಆಯೋಗದ್ದು’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.