ADVERTISEMENT

ಸಿಂದಗಿ, ಹಾನಗಲ್‌ ಉಪ ಚುನಾವಣೆ ಶಾಂತಿಯುತ: ಸಂಪೂರ್ಣ ಮತದಾನ ವಿವರ ಇಲ್ಲಿದೆ...

ನ.2ರಂದು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 20:45 IST
Last Updated 30 ಅಕ್ಟೋಬರ್ 2021, 20:45 IST
ಸಿಂದಗಿ ಕ್ಷೇತ್ರದ ಗಣಿಹಾರ ಗ್ರಾಮದಲ್ಲಿ ಶನಿವಾರ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಬಂದು ಮತ ಚಲಾಯಿಸಿದರು
ಸಿಂದಗಿ ಕ್ಷೇತ್ರದ ಗಣಿಹಾರ ಗ್ರಾಮದಲ್ಲಿ ಶನಿವಾರ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಬಂದು ಮತ ಚಲಾಯಿಸಿದರು   

ವಿಜಯಪುರ/ ಹಾವೇರಿ:ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನಸಭಾ ಉಪಚುನಾವಣೆಗೆ ಶನಿವಾರ ಶಾಂತಿಯುತ ಮತದಾನ ನಡೆಯಿತು. ಪ್ರಾಥಮಿಕ ವರದಿ ಪ್ರಕಾರ, ಸಿಂದಗಿಯಲ್ಲಿ ಶೇ 69.41ರಷ್ಟು ಹಾಗೂ ಹಾನಗಲ್‌ದಲ್ಲಿ ಶೇ 83.44 ರಷ್ಟು ಮತದಾನವಾಗಿದೆ. ನವೆಂಬರ್‌ 2ರಂದು ಮತ ಎಣಿಕೆ ನಡೆಯಲಿದೆ.

ಸಿಂದಗಿ ಕಣದಲ್ಲಿ 6 ಹಾಗೂಹಾನಗಲ್‌ ಕಣದಲ್ಲಿ13 ಅಭ್ಯರ್ಥಿಗಳಿದ್ದಾರೆ.ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ. ಮನಗೂಳಿ ಹಾಗೂ ಹಾನಗಲ್‌ ಕ್ಷೇತ್ರದ ಶಾಸಕ ಸಿ.ಎಂ. ಉದಾಸಿ ಅವರ ಸಾವಿನಿಂದ ತೆರವಾಗಿದ್ದ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ.

ಮುಂಜಾನೆಯಿಂದಲೇ ಮತಗಟ್ಟೆಗಳತ್ತ ಮತದಾರರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಕೋವಿಡ್‌ ಮಾರ್ಗಸೂಚಿ ಪ್ರಕಾರ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಥರ್ಮಲ್ ಸ್ಕ್ಯಾನರ್‌ ಮೂಲಕ ಮತದಾರರ ದೇಹದ ಉಷ್ಣಾಂಶ ಪರೀಕ್ಷಿಸಿ, ಕೈಗಳಿಗೆ ಸ್ಯಾನಿಟೈಸರ್‌ ಹಾಕಿದ ನಂತರ ಮತಗಟ್ಟೆಗಳಿಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ADVERTISEMENT

ಮತದಾನ ಆರಂಭಕ್ಕೂಮುನ್ನಾ ಸಿಂದಗಿ ವ್ಯಾಪ್ತಿಯ ಆಲಮೇಲ ಪಟ್ಟಣದ ವಾರ್ಡ್‌ 1ರಲ್ಲಿ ಹಿಂದು–ಮುಸ್ಲಿಂ ಮಹಿಳೆಯರು ಮತಗಟ್ಟೆಗೆ ಒಟ್ಟಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ಮತದಾನಕ್ಕೆ ಚಾಲನೆ ನೀಡಿರುವುದು ಗಮನ ಸೆಳೆಯಿತು.ವೃದ್ಧರು ತಮ್ಮ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಉತ್ಸಾಹದಿಂದ ಮತ ಚಲಾಯಿಸಿದರು.

ಗಣಿಹಾರದಲ್ಲಿ ವ್ಯಕ್ತಿಯೊಬ್ಬರು ಜೆಡಿಎಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ ದೃಶ್ಯವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ.ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದ, ನಾಗಾವಿ ಬಿ.ಕೆ.ಯಲ್ಲಿ ಘರ್ಷಣೆ, ನಾಲ್ಕು ಕಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.