ADVERTISEMENT

ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ ಅರ್ಧಕ್ಕೇ ಮೊಟಕು

ಅಡ್ವೊಕೇಟ್ ಜನರಲ್ ಅಭಿಪ್ರಾಯಕ್ಕೆ ಕಾಯುತ್ತಿರುವ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:00 IST
Last Updated 9 ಅಕ್ಟೋಬರ್ 2018, 20:00 IST
ಗೋಕರ್ಣ ದೇಗುಲದ ಚಿನ್ನಾಭರಣವನ್ನು ಕುಮಟಾ ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಹಾಗೂ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು
ಗೋಕರ್ಣ ದೇಗುಲದ ಚಿನ್ನಾಭರಣವನ್ನು ಕುಮಟಾ ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಹಾಗೂ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು   

ಗೋಕರ್ಣ/ ಕಾರವಾರ:ಇಲ್ಲಿನ ಮಹಾಬಲೇಶ್ವರದೇಗುಲವನ್ನು ರಾಮಚಂದ್ರಾಪುರ ಮಠಕ್ಕೆ ಪುನಃ ಹಸ್ತಾಂತರಿಸಲು ಬುಧವಾರ ಕೈಗೊಳ್ಳಲಾಗಿದ್ದ ಪ್ರಕ್ರಿಯೆಯನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು. ಜಿಲ್ಲಾಧಿಕಾರಿ ಆದೇಶದಂತೆ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಟಾ ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ದೇವಸ್ಥಾನವನ್ನು ಹಸ್ತಾಂತರಿಸದೇ ವಾಪಸಾದರು.

ಹಸ್ತಾಂತರ ಪ್ರಕ್ರಿಯೆಯ ಭಾಗವಾಗಿ ಬೆಳಿಗ್ಗೆ 9.30ಕ್ಕೆ ಚಿನ್ನಾಭರಣ ಪರಿಶೀಲನಾ ಕಾರ್ಯ ಪ್ರಾರಂಭವಾಗಿತ್ತು. ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಅಧಿಕಾರಿ ಸುರೇಶ, ಕುಮಟಾ ತಹಶೀಲ್ದಾರ್ ಮೇಘರಾಜ್ ನಾಯ್ಕ ಭಾಗವಹಿಸಿದ್ದರು.ಆದರೆ, ಪ್ರಕ್ರಿಯೆಯನ್ನು ನಿಲ್ಲಿಸುವಂತೆಕೆಲವೇ ನಿಮಿಷಗಳಲ್ಲಿ ಜಿಲ್ಲಾಡಳಿತದಿಂದ ಸೂಚನೆ ಬಂತು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಉಪ ವಿಭಾಗಾಧಿಕಾರಿ ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಆದರೆ, ಪ್ರಕ್ರಿಯೆ ಆರಂಭವಾದ ಬಳಿಕ ಅಡ್ವೊಕೇಟ್ ಜನರಲ್ (ಎ.ಜಿ) ಅವರ ಅಭಿಪ್ರಾಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಯಿತು. ಹೀಗಾಗಿ ಪ್ರಕ್ರಿಯೆಯನ್ನು ರದ್ದು ಮಾಡಿದ್ದೇವೆ. ಎ.ಜಿ ಅವರ ಅಭಿಪ್ರಾಯ ತಿಳಿದುಕೊಂಡು ಮುಂದುವರಿಯುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಈವರೆಗೆ ಸ್ಥಳೀಯ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡು ನಾವು ಮುಂದುವರಿದಿದ್ದೆವು. ಎ.ಜಿ ಅವರ ಅಭಿಪ್ರಾಯ ಲಭಿಸಿದಕೆಲವು ದಿನಗಳಲ್ಲಿ ಎಲ್ಲಗೊಂದಲಗಳೂಬಗೆಹರಿಯುವ ನಿರೀಕ್ಷೆಯಿದೆ’ ಎಂದರು ಹೇಳಿದರು.

ದೇಗುಲದ ಕಾರ್ಯ ನಿರ್ವಹಣಾಧಿಕಾರಿಯಾಗಿ ನಿಯುಕ್ತಿಗೊಂಡ ಎಚ್.ಹಾಲಪ್ಪ ಅವರ ಅನುಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿ ದೇವಸ್ಥಾನವನ್ನು ಪುನಃ ಹಸ್ತಾಂತರಿಸಲು ಏಕೆ ಮುಂದಾದರು ಎಂಬ ಪ್ರಶ್ನೆ ಉದ್ಭವಿಸಿದೆ.

ಜಿಲ್ಲಾಡಳಿತದಿಂದ ಅವಸರ; ಆರೋಪ:ನ್ಯಾಯಾಲಯದಲ್ಲಿ ಅರ್ಜಿದಾರರಾದ ಗಜಾನನ ಕೃಷ್ಣ ಹಿರೇ, ‘ಜಿಲ್ಲಾಡಳಿತ ಅವಸರದ ನಿರ್ಧಾರ ಗೊಂದಲ ಮೂಡಿಸುತ್ತಿದೆ. ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಹಾಲ‌ಪ್ಪ ಅವರು ಆಗಸ್ಟ್ 30ರಂದೇ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆ.7ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಅದರಂತೆ ಹಾಲಪ್ಪಅವರೇ ಮುಂದುವರಿಯಬೇಕಾಗಿದೆ. ಮುಜರಾಯಿ ಇಲಾಖೆಯ ದ್ವಂದ್ವ ನೀತಿ ಖಂಡನಾರ್ಹ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.