ADVERTISEMENT

ಅನಿತಾ, ಅಶ್ವತ್ಥ ಆರೋಪ– ಪ್ರತ್ಯಾರೋಪ

ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:00 IST
Last Updated 21 ಫೆಬ್ರುವರಿ 2023, 22:00 IST
ಕಾರ್ಯಕ್ರಮದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತುಕತೆಯಲ್ಲಿ ತೊಡಗಿದ್ದರು
ಕಾರ್ಯಕ್ರಮದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತುಕತೆಯಲ್ಲಿ ತೊಡಗಿದ್ದರು   

ಹಾರೋಹಳ್ಳಿ (ರಾಮನಗರ): ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ಕಾರ್ಯಕ್ರಮದ ವೇದಿಕೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ನಡುವಿನ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು.

ಹಾರೋಹಳ್ಳಿ ತಾಲ್ಲೂಕು ಕಾರ್ಯಾರಂಭ ಹಾಗೂ ತಾಲ್ಲೂಕು ಕಚೇರಿ ಉದ್ಘಾಟನೆ ಮಂಗಳವಾರ ಬೆಳಿಗ್ಗೆ 9ಕ್ಕೆ ನಿಗದಿ ಆಗಿತ್ತು. ಮೊದಲಿಗೆ ಬಂದ ಸಚಿವ ಅಶ್ವತ್ಥನಾರಾಯಣ ತಾಲ್ಲೂಕು ಕಚೇರಿ ಉದ್ಘಾಟಿಸಿ, ಕಾರ್ಯಕ್ರಮ ಆರಂಭಿಸಿದರು. ತಡವಾಗಿ ಬಂದ ಶಾಸಕಿ ಅನಿತಾ ಕುಮಾರಸ್ವಾಮಿ ಅವರೂ ಮತ್ತೊಮ್ಮೆ ತಾಲ್ಲೂಕು ಕಚೇರಿ ಉದ್ಘಾಟಿಸಿದರು.

ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೇಗ ಭಾಷಣ ಮುಗಿಸಿ ಸಚಿವರು ನಿರ್ಗಮಿಸಿದರು. ನಂತರ ಮಾತನಾಡಿದ ಅನಿತಾ, ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ‘ನಾನು ಬರುವ ಮುಂಚೆಯೇ ಬೇಕಂತಲೇ ಕಾರ್ಯಕ್ರಮ ಉದ್ಘಾಟಿಸಿ ಅವಮಾನ ಮಾಡಿದ್ದಾರೆ. ಹಾರೋಹಳ್ಳಿ ತಾಲ್ಲೂಕು ಮಾಡಿದ್ದು ತಮ್ಮ ಸರ್ಕಾರ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಇದರಲ್ಲಿ ಕುಮಾರಸ್ವಾಮಿ ಹಾಗೂ ನನ್ನ ಪರಿಶ್ರಮವಿದೆ. ಕುಮಾರಸ್ವಾಮಿ ಅವರು ಬಂದಿದ್ದರೆ ಇವರೆಲ್ಲ ಹೀಗೆ ಮಾತನಾಡುತ್ತಿರಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಹಕ್ಕುಚ್ಯುತಿ: ಕಾರ್ಯಕ್ರಮದ ಬೆನ್ನಲ್ಲೇ ಅನಿತಾ ಕುಮಾರಸ್ವಾಮಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದು, ಶಿಷ್ಟಾಚಾರ ಉಲ್ಲಂಘನೆ ಮತ್ತು ಹಕ್ಕುಚ್ಯುತಿ ಆರೋಪ ಮಾಡಿದ್ದಾರೆ.

‘ಶಿಷ್ಟಾಚಾರ ಬದಿಗೊತ್ತಿ ಮಹಿಳಾ ಶಾಸಕಿಗೆ ಅವಮಾನ ಮಾಡಿದ್ದಾರೆ. ತಾಲ್ಲೂಕಿನ ರಚನೆಗೆ ಕಾರಣರಾದ ಕುಮಾರಸ್ವಾಮಿ ಅವರನ್ನು ನೆನೆದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆ ಸಭಾಧ್ಯಕ್ಷರು ಮತ್ತು ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ನೀಡುತ್ತೇನೆ’ ಎಂದು ಹೇಳಿದ್ದಾರೆ.

ಇದಕ್ಕೆ ಅಶ್ವತ್ಥನಾರಾಯಣ ಟ್ವೀಟ್‌ ಮಾಡಿದ್ದು, ‘ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗದ ಶಾಸಕರು ನಂತರ ದೂರುವುದು ಸರಿಯಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲಿ. ಕುಮಾರಸ್ವಾಮಿ ಕೊಡುಗೆಯನ್ನೂ ಸ್ಮರಿಸಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.