ಹರಪನಹಳ್ಳಿ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಲಂಚ ತೆಗೆದುಕೊಂಡಿದ್ದಕ್ಕೆ ಬಿಇಒ ಎಲ್.ರವಿ ಹಾಗೂ ಎಫ್ಡಿಸಿ ಕೃಷ್ಣಮೂರ್ತಿ ಅವರನ್ನು ಬಂಧಿಸಿದ್ದಾರೆ.
ತೆಲಗಿ ಗ್ರಾಮದ ನಿವೃತ್ತ ಶಿಕ್ಷಕ ಅಂಜಿನಪ್ಪ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಪಿಂಚಣಿ ಹಾಗೂ ಇತರ ಸೌಲಭ್ಯ ಪಡೆಯಲು ಬಿಇಒ ಕಚೇರಿಯ ಎಫ್ಡಿಸಿ ಶ್ರೀನಿವಾಸ್ ಅವರ ಬಳಿ ದಾಖಲೆ ಸಲ್ಲಿಸಿದ್ದರು. ಸೌಲಭ್ಯಕ್ಕಾಗಿ ಹಲವು ಬಾರಿ ಕಚೇರಿಗೂ ಅಲೆದಾಡಿದ್ದರು. ಇದಾದ ಕೆಲ ದಿನಗಳಲ್ಲಿ ಅಂಜಿನಪ್ಪ ಅಪಘಾತದಲ್ಲಿ ಗಾಯಗೊಂಡರು.
ಚೇತರಿಸಿಕೊಂಡ ನಂತರ ಮತ್ತೆ ಸೌಲಭ್ಯಕ್ಕಾಗಿ ಕಚೇರಿಗೆ ಅಲೆದರು. ಸಿಬ್ಬಂದಿ ಬಿಇಒ ಅವರನ್ನು ಕಾಣಲು ತಿಳಿಸಿದ್ದರು. ಅಲ್ಲದೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತಿದ್ದ ಅಂಜಿನಪ್ಪ ಎಸಿಬಿಗೆ ದೂರು ನೀಡಿದ್ದರು.
ಸೋಮವಾರ ಎಸಿಬಿ ತಂಡ ಅಂಜಿನಪ್ಪ ಅವರೊಂದಿಗೆ ಬಂದಾಗ ಬಿಇಒ ಕಚೇರಿಯಲ್ಲಿರಲಿಲ್ಲ. ಆಗ ಸಹಾಯಕ ಕೃಷ್ಣಮೂರ್ತಿ ಅವರ ಮೂಲಕ ಬಿಇಒ ಅವರಿಗೆ ದೂರವಾಣಿ ಕರೆ ಮಾಡಿ, ಅಂಜಿನಪ್ಪ ₹ 10 ಸಾವಿರ ತಂದಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಇಒ ಪ್ರತಿಕ್ರಿಯಿಸಿ ಹಣ ಪಡೆದು, ಅವರ ಕೆಲಸ ಮಾಡಿಕೊಡುವಂತೆ ತಿಳಿಸಿದ್ದಾರೆ. ಲಂಚ ಪಡೆದಿರುವುದು ಸಾಬೀತಾಗಿದ್ದರಿಂದ ಎಸಿಬಿ ಅಧಿಕಾರಿಗಳು ಬಿಇಒ ಹಾಗೂ ಗುಮಾಸ್ತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.