ADVERTISEMENT

ಚಾಮರಾಜನಗರ ದುರಂತ: ತಲಾ ₹2 ಲಕ್ಷ ಪರಿಹಾರ

ಹೈಕೋರ್ಟ್‌ ಪೀಠದ ಮುಂದೆ ಸರ್ಕಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 16:37 IST
Last Updated 20 ಮೇ 2021, 16:37 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ.

ಪರಿಹಾರ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಶೇಷ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದರು. ‘ಆದಷ್ಟು ಬೇಗ ಪರಿಹಾರವನ್ನು ಮೃತರ ಕುಟುಂಬದವರಿಗೆ ತಲುಪಿಸಬೇಕು’ ಎಂದು ಪೀಠ ತಿಳಿಸಿತು.

‘ಮೃತಪಟ್ಟವರು 24 ಜನರಷ್ಟೆಯೇ ಎಂಬುದನ್ನೂ ಪರಿಶೀಲಿಸುವ ಅಗತ್ಯವಿದೆ. ಕಾನೂನು ಸೇವೆಗಳ ಪ್ರಾಧಿಕಾರದ(ಕೆಎಸ್‌ಎಲ್‌ಎಸ್‌ಎ) ಮೂವರು ಸದಸ್ಯರ ಸಮಿತಿಯು ಮೇ 4ರಿಂದ ಮೇ 10ರ ನಡುವೆ 36 ರೋಗಿಗಳು ಆಮ್ಲಜನಕ ಕೊರತೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದೆ’ ಎಂದು ಪೀಠ ಹೇಳಿದೆ.

ADVERTISEMENT

ಮೇ 17 ಮತ್ತು 18ರಂದು ದಿನಕ್ಕೆ 1,015 ಟನ್‌ಗೂ ಕಡಿಮೆ ಆಮ್ಲಜನಕ ಸಂಗ್ರಹ ಇತ್ತು ಎಂದು ಸರ್ಕಾರ ಮಾಹಿತಿ ನೀಡಿತು. ರಾಜ್ಯಕ್ಕೆ ಮೇ 17ರಿಂದ 24ರ ಅವಧಿಗೆ ಆಮ್ಲಜನಕದ ಅವಶ್ಯಕತೆ ಎಷ್ಟಿದೆ. ಸಂಗ್ರಹ ಇರುವ ಪ್ರಮಾಣ ಎಷ್ಟು ಎಂಬ ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ಸುಪ್ರೀಂ ಕೋರ್ಟ್‌ ಆದೇಶದಂತೆ ಆಮ್ಲಜನಕ ಹೆಚ್ಚುವರಿಯಾಗಿ ಸಂಗ್ರಹಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.