ADVERTISEMENT

ಮಹಿಳೆಯ ರಕ್ಷಣೆಗೆ ನ್ಯಾಯಾಲಯಗಳು ಕೃಷ್ಣನಂತೆ ವರ್ತಿಸಬೇಕು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:20 IST
Last Updated 11 ಸೆಪ್ಟೆಂಬರ್ 2020, 19:20 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಮಹಿಳೆಯರ ರಕ್ಷಣೆ ವಿಷಯದಲ್ಲಿ ನ್ಯಾಯಾಲಯಗಳು ಧರ್ಮ ರಕ್ಷಣೆಗೆ ಮುಂದಾದ ಕೃಷ್ಣನಂತೆ ವರ್ತಿಸಬೇಕು’ ಹೈಕೋರ್ಟ್‌ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

‘ಮಹಿಳೆಯರ ಮೇಲೆ ತಲತಲಾಂತಗಳಿಂದ ಅನ್ಯಾಯ ನಡೆಯುತ್ತಿರುವಾಗ ನ್ಯಾಯಾಲಯಗಳು ಮೂಕ ಪ್ರೇಕ್ಷಕನಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ವಿಭಾಗೀಯ ಪೀಠ, ಅತ್ಯಾಚಾರ ಪ್ರಕರಣವೊಂದರ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಿಳೆಯರಿಗೆ ರಕ್ಷಣೆ ಇಲ್ಲ. ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರಮಹಿಳೆಯರ ಸುರಕ್ಷತೆಯನ್ನು ಕಾಪಾಡಲು ನ್ಯಾಯಾಲಯಗಳು ರಕ್ಷಕರಾಗಿ ಕಾರ್ಯನಿರ್ವಹಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂದೆ ಮುಂದೆ ನೋಡಬಾರದು’ ಎಂದು ತಿಳಿಸಿದ ಪೀಠ,ಭಗವದ್ಗೀತೆಯ 4ನೇ ಅಧ್ಯಾಯದ 7-8ನೇ ಪದ್ಯವನ್ನು ಉಲ್ಲೇಖಿಸಿತು.

69 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ 2014ರಲ್ಲಿ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದು ಪ್ರಶಂಸೆ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.